ಲಖನೌ: ಬಿಜೆಪಿ ನೀಡುತ್ತಿರುವ ಕೋವಿಡ್ ಲಸಿಕೆ ನಂಬಲರ್ಹವಲ್ಲ. ಹಾಗಾಗಿ, ನಾನು ಆ ಲಸಿಕೆ ಪಡೆಯುವುದಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.
“ಬಿಜೆಪಿ ಸರ್ಕಾರ ನೀಡುತ್ತಿರುವ ಲಸಿಕೆಯನ್ನು ನಾನು ಹಾಕಿಸಿಕೊಳ್ಳುವುದಿಲ್ಲ. ನನಗೆ ಅವರ ಮೇಲೆ ನಂಬಿಕೆ ಇಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಎಲ್ಲರಿಗೂ ಉಚಿತ ಲಸಿಕೆ ನೀಡುತ್ತೇವೆ," ಎಂದು ಲಖನೌದಲ್ಲಿ ಮಾಧ್ಯಮದವರನ್ನು ಉದ್ಧೇಶಿಸಿ ಅಖಿಲೇಶ್ ಯಾದವ್ ಹೇಳಿದ್ಧಾರೆ.
ಆಕ್ಸ್ಫರ್ಡ್–ಆಸ್ಟ್ರಜೆನಿಕಾ ಸಿದ್ಧಪಡಿಸಿರುವ ಕೋವಿಡ್ ಲಸಿಕೆಬಳಸಲು ಔಷಧಿ ನಿಯಂತ್ರಕಕ್ಕೆ ತಜ್ಞರ ಸಮಿತಿ ಹಸಿರು ನಿಶಾನೆ ತೋರಿದ ಬಳಿಕ ದೇಶಾದ್ಯಂತ ಲಸಿಕೆ ತಾಲೀಮು ನಡೆಯುತ್ತಿರುವ ಈ ಸಂದರ್ಭದಲ್ಲಿ ಅಖಿಲೇಶ್ ಈ ಹೇಳಿಕೆ ನೀಡಿದ್ದಾರೆ. ವಿಪಕ್ಷಗಳು ಏನಾದರೂ ಮಾಡಿದಾಗ ಮಾತ್ರ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕೊರೋನಾ ಲಸಿಕೆ ಬಗ್ಗೆ ಚಿಂತಿಸುತ್ತದೆ ಎಂದಿದ್ಧಾರೆ.
"ಕೊರೋನಾ ವೈರಸ್ ಹೆಸರಿನಲ್ಲಿ ಜನರಿಂದ ಹಣ ಸುಲಿಗೆ ಮಾಡಲಾಗುತ್ತಿದೆ. ವಿರೋಧ ಪಕ್ಷಗಳು ಏನಾದರೂ ಮಾಡಿದಾಗ ಮಾತ್ರ ಈ ಸರ್ಕಾರವು ಕರೋನದ ಬಗ್ಗೆ ಕಾಳಜಿ ವಹಿಸುತ್ತದೆ. ಅದೇ ಬಿಜೆಪಿ ಸರ್ಕಾರವು ಚಪ್ಪಾಳೆ ತಟ್ಟಿ ಮತ್ತು ಜಾಗಟೆ ಬಾರಿಸುವ ಮೂಲಕ ಕರೋನವನ್ನು ತೊಡೆದು ಹಾಕಲು ಬಯಸಿತ್ತು" ಎಂದು ಅವರು ಟೀಕಿಸಿದ್ದಾರೆ.
ಲಸಿಕೆ ಬಗ್ಗೆ ಅಖಿಲೇಶ್ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಉತ್ತರ ಪ್ರದೆಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ದಾಖಲೆಯ ಸಮಯದಲ್ಲಿ ಲಸಿಕೆ ನೀಡಿದ ವಿಜ್ಞಾನಿಗಳ ಶ್ರಮವನ್ನು ಪ್ರಶ್ನಿಸುವ ಹೇಳಿಕೆ ಕೊಟ್ಟಿದ್ದಕ್ಕೆ ಅಖಿಲೇಶ್ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.
"ಅಖಿಲೇಶ್ ಯಾದವ್ ಲಸಿಕೆ ಮೇಲೆ ನಂಬಿಕೆ ಇಡದಿದಿದ್ದರೆ, ಉತ್ತರ ಪ್ರದೇಶದ ಜನರೂ ಅವರನ್ನು ನಂಬುವುದಿಲ್ಲ. ಅಖಿಲೇಶ್ ತಮ್ಮ ಹೇಳಿಕೆ ಬಗ್ಗೆ ಕೂಡಲೇ ಕ್ಷಮೆಯಾಚಿಸಬೇಕು‘ ಎಂದು ಒತ್ತಾಯಿಸಿದ್ದಾರೆ..