ಆಲ್ವಾರ್ (ರಾಜಸ್ಥಾನ): ‘ಭಾರತ ಜೋಡೊ ಯಾತ್ರೆ ಮೂಲಕ ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯುತ್ತಿದ್ದೇನೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಹೇಳಿದರು.
ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು,‘ಯಾತ್ರೆಯು 100 ದಿನಗಳನ್ನು ಪೂರೈಸಿದೆ. ಈ ಹಾದಿಯಲ್ಲಿ ಬಿಜೆಪಿ ಕಚೇರಿಗಳ ಮೇಲೆ ನಿಂತು ಯಾತ್ರೆ ವೀಕ್ಷಿಸುತ್ತಿದ್ದ ಹಲವು ಸ್ನೇಹಿತರನ್ನು ಭೇಟಿ ಮಾಡಿದೆ. ಮೊದಮೊದಲು ನಾನು ಕೈಬೀಸಿದರೆ ಅವರು ಪ್ರತಿಕ್ರಿಯಿಸುತ್ತಿರಲಿಲ್ಲ, ನಂತರ ಕೈಬೀಸಲು ಆರಂಭಿಸಿದರು’ ಎಂದರು.
‘ಅವರಲ್ಲಿ (ಬಿಜೆಪಿಗರು) ಕೆಲವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯಾತ್ರೆ ಹೊರಟಿರುವುದೇಕೆ ಎಂದು ಕೇಳುತ್ತಾರೆ.ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯುತ್ತಿದ್ದೇನೆ ಎಂಬುದೇ ನನ್ನ ಉತ್ತರ’ ಎಂದು ಹೇಳಿದರು.
‘ಬಿಜೆಪಿ ನಾಯಕರು ನನ್ನನ್ನು ನಿಂದಿಸುತ್ತಾರೆ, ದ್ವೇಷವನ್ನು ಬಿತ್ತುತ್ತಾರೆ’ ಎಂದು ಆರೋಪಿಸಿದರು.
ಇದೇ ಸಂದರ್ಭದಲ್ಲಿ ತಿಂಗಳಲ್ಲಿ ಒಮ್ಮೆ ಯಾತ್ರೆ ಕೈಗೊಂಡು ಜನಸಾಮಾನ್ಯರ ಕುಂದು ಕೊರತೆಗಳನ್ನು ಆಲಿಸಿ ಎಂದು ರಾಜಸ್ಥಾನದ ಸಚಿವರಿಗೆ ಕರೆ ನೀಡಿದರು.