ನವದೆಹಲಿ: ನದಿ ನೀರು ಹಂಚಿಕೆ, ಮಾಲಿನ್ಯ ನಿಯಂತ್ರಣ, ತೀರಗಳ ಸಂರಕ್ಷಣೆ, ಪ್ರವಾಹ ಪರಿಸ್ಥಿತಿ ನಿರ್ವಹಣೆ ಸೇರಿದಂತೆ ಹಲವಾರು ವಿಷಯಗಳಲ್ಲಿ ಸಹಕಾರ ನೀಡಲು ಭಾರತ ಹಾಗೂ ಬಾಂಗ್ಲಾದೇಶ ಸಮ್ಮತಿಸಿವೆ ಎಂದು ಬುಧವಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಭಾರತ–ಬಾಂಗ್ಲಾದೇಶ ಜಲಸಂಪನ್ಮೂಲ ಕಾರ್ಯದರ್ಶಿಗಳ ಮಟ್ಟದ ಸಭೆ ಮಾರ್ಚ್ 16ರಂದು ನಡೆಯಿತು. ಜಂಟಿ ನದಿಗಳ ಆಯೋಗದ ನಿಯಮಗಳ ಚೌಕಟ್ಟಿನೊಳಗೆ ನಡೆದ ಸಭೆಯಲ್ಲಿ ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಯಿತು ಎಂದೂ ಪ್ರಕಟಣೆ ತಿಳಿಸಿದೆ.
ಭಾರತ ಮತ್ತು ಬಾಂಗ್ಲಾದೇಶಗಳ ಮೂಲಕ 54 ನದಿಗಳು ಹರಿಯುತ್ತಿವೆ. ಎರಡೂ ದೇಶಗಳಲ್ಲಿರುವ ಲಕ್ಷಾಂತರ ಜನರ ಜೀವನೋಪಾಯ ಈ ನದಿಗಳನ್ನು ಅವಲಂಬಿಸಿದೆ. ಇದೇ ಕಾರಣಕ್ಕೆ, ನದಿಗಳ ನೀರು ಹಂಚಿಕೆ, ನದಿ ಪಾತ್ರಗಳ ನಿರ್ವಹಣೆ ಸೇರಿದಂತೆ ವಿವಿಧ ವಿಷಯಗಳಲ್ಲಿ ಮೊದಲಿನಂದಲೂ ಉಭಯ ದೇಶಗಳ ನಡುವೆ ಸಹಕಾರ ಇದೆ.
ಕಾರ್ಯದರ್ಶಿಗಳ ಮಟ್ಟದ ಮುಂದಿನ ಸಭೆಯನ್ನು ಢಾಕಾದಲ್ಲಿ ಆಯೋಜನೆ ಮಾಡಲು ಉಭಯ ದೇಶಗಳ ನಿಯೋಗಗಳು ಸಮ್ಮತಿಸಿದವು.
ಜಲಸಂಪನ್ಮೂಲ, ನದಿಗಳ ಅಭಿವೃದ್ಧಿ ಹಾಗೂ ಗಂಗಾ ಪುನಶ್ಚೇತನ ಸಚಿವಾಲಯದ ಕಾರ್ಯದರ್ಶಿ ಪಂಕಜಕುಮಾರ್ ಭಾರತದ ನಿಯೋಗದ ನೇತೃತ್ವ ವಹಿಸಿದ್ದರು.
ಜಲಸಂಪನ್ಮೂಲ ಸಚಿವಾಲಯದ ಹಿರಿಯ ಕಾರ್ಯದರ್ಶಿ ಕಬೀರ್ ಬಿನ್ ಅನ್ವರ್ ಅವರು ಬಾಂಗ್ಲಾದೇಶದ ನಿಯೋಗದ ನೇತೃತ್ವ ವಹಿಸಿದ್ದರು.