ನವದೆಹಲಿ: ಪ್ರತ್ಯೇಕ ಖಾಲಿಸ್ತಾನದ ಬೇಡಿಕೆಗೆ ಸಂಬಂಧಿಸಿದಂತೆ ಕೆಲ ಭಾರತ ವಿರೋಧಿ ಶಕ್ತಿಗಳು ಕೆನಡಾದಲ್ಲಿ ಜನಾಭಿಪ್ರಾಯ ಸಂಗ್ರಹಕ್ಕೆ ಮುಂದಾಗಿರುವ ಬಗ್ಗೆ ಭಾರತ ಶುಕ್ರವಾರ ಕಳವಳ ವ್ಯಕ್ತಪಡಿಸಿದೆ.
‘ಕೆನಡಾ ರಾಯಭಾರ ಕಚೇರಿಗೆ ಹಾಗೂ ಅಲ್ಲಿನ ಸರ್ಕಾರಕ್ಕೆ ಭಾರತ ತನ್ನ ಕಳವಳವನ್ನು ವಿವರಿಸಿದೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.
‘ಭಾರತ ವಿರೋಧಿ ಶಕ್ತಿಗಳಿಂದ ನಡೆಯಲಿರುವ ಜನಾಭಿಪ್ರಾಯ ಸಂಗ್ರಹಕ್ಕೆ ಸಂಬಂಧಿಸಿ ನಮ್ಮ ನಿಲುವು ಸ್ಪಷ್ಟವಾಗಿದ್ದು, ಕೆನಡಾ ಸರ್ಕಾರಕ್ಕೆ ತಿಳಿಸಿದ್ದೇವೆ. ಈ ಮಾಹಿತಿಯನ್ನು ನಾವು ಬಹಿರಂಗವಾಗಿಯೇ ಹಂಚಿಕೊಂಡಿದ್ದೇವೆ’ ಎಂದೂ ಅವರು ಹೇಳಿದ್ದಾರೆ.