ಲಖನೌ: ‘ಹೇಡಿ’ಜವಾಹರಲಾಲ್ ನೆಹರೂ ಅವರ ನಾಯಕತ್ವದಿಂದಾಗಿ ಸ್ವಾತಂತ್ರ್ಯದ ಸಮಯದಲ್ಲಿ ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಲು ಸಾಧ್ಯವಾಗಿಲ್ಲ ಎಂದು ಉತ್ತರ ಪ್ರದೇಶದ ಬೈರಿಯಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಶನಿವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ವಿಭಜನೆಗೆ ಕಾರಣವಾದದ್ದು ಕಾಂಗ್ರೆಸ್ಸಿನ "ಕೊಳಕು ಚಿಂತನೆ" ಎಂದು ಆರೋಪಿಸಿದ ಸಿಂಗ್, ನೆಹರೂ ಪ್ರಧಾನ ಮಂತ್ರಿಯಾಗಿರದಿದ್ದರೆ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬಹುದಿತ್ತು ಎಂದಿದ್ದಾರೆ.
‘ಎರಡು ಸಂಸ್ಕೃತಿಗಳನ್ನು ಆಧರಿಸಿ ಎರಡು ರಾಷ್ಟ್ರಗಳು ರಚನೆಯಾದವು. ಆದರೆ 'ಬುಜ್ಡಿಲ್' (ಹೇಡಿ) ನೆಹರೂ ಅವರ ನಾಯಕತ್ವದಿಂದಾಗಿ ಸ್ವಾತಂತ್ರ್ಯದ ಸಮಯದಲ್ಲಿ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಲಾಗಿಲ್ಲ’ ಎಂದು ಬಿಜೆಪಿ ಶಾಸಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನೆಹರೂ ಬದಲಿಗೆ ಸರ್ದಾರ್ ಪಟೇಲ್ ಪ್ರಧಾನಿಯಾಗಿದ್ದರೆ ಭಾರತ ಹಿಂದೂ ರಾಷ್ಟ್ರವಾಗಿರುತ್ತಿತ್ತು ಎಂದು ಅವರು ಹೇಳಿದರು.
ಕಾಶ್ಮೀರದಲ್ಲಿ 370 ನೇ ವಿಧಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಹೇಳಿಕೆ ನೀಡಿದ್ದನ್ನು ಉಲ್ಲೇಖಿಸಿದ ಅವರು, ದಿಗ್ವಿಜಯ್ ಸಿಂಗ್ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲಿಸಬೇಕೆಂದು ಒತ್ತಾಯಿಸಿದರು.
ತಮ್ಮ ಪಕ್ಷವು ಅಧಿಕಾರಕ್ಕೆ ಮರಳಿದರೆ 370 ನೇ ವಿಧಿ ಹಿಂತೆಗೆದುಕೊಳ್ಳುವಿಕೆ ಮತ್ತು ಜಮ್ಮು ಮತ್ತು ಕಾಶ್ಮೀರ ಕಳೆದುಕೊಂಡಿರುವ ರಾಜ್ಯದ ಸ್ಥಾನಮಾನದ ಮರುಪರಿಶೀಲನೆ ನಡೆಸುವುದಾಗಿ ದಿಗ್ವಿಜಯ್ ಸಿಂಗ್ ಸಾಮಾಜಿಕ ಮಾಧ್ಯಮದ ಆಡಿಯೋ ಚಾಟ್ ನಲ್ಲಿ ಪ್ರತಿಕ್ರಿಯಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.