ನವದೆಹಲಿ: ‘ಏಕಪಕ್ಷೀಯ ನಿರ್ಧಾರಗಳು ಮತ್ತು ಆಕ್ರಮಣಕಾರಿ ಮನೋಭಾವದ ಎದುರು ಭಾರತವು ತನ್ನ ಸಾರ್ವಭೌಮತೆ ಮತ್ತು ಏಕತೆ ಕಾಪಾಡಿಕೊಳ್ಳಲು ದೃಢಸಂಕಲ್ಪ ಮಾಡಿದೆ’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದರು.
ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಆಯೋಜಿಸಿದ್ದ ವರ್ಚುವಲ್ ವಿಚಾರ ಸಂಕಿರಣದಲ್ಲಿ ಗುರುವಾರ ಮಾತನಾಡಿದ ಅವರು, ‘ಭಾರತ ಶಾಂತಿ ಬಯಸುವ ರಾಷ್ಟ್ರ. ಭಿನ್ನಾಭಿಪ್ರಾಯಗಳು ವಿವಾದಕ್ಕೆ ತಿರುಗಬಾರದು ಎಂದು ನಾವು ಬಯಸುತ್ತೇವೆ‘ ಎಂದು ಹೇಳಿದರು.
‘ಮಾತುಕತೆಯ ಮೂಲಕ ಭಿನ್ನಾಭಿಪ್ರಾಯಗಳನ್ನು ಶಾಂತಿಯುತವಾಗಿ ಪರಿಹರಿಸಲು ಭಾರತ ಮಹತ್ವ ನೀಡುತ್ತದೆ. ಗಡಿಯುದ್ದಕ್ಕೂ ಶಾಂತಿ ಕಾಪಾಡಿಕೊಳ್ಳಲು ವಿವಿಧ ಒಪ್ಪಂದಗಳನ್ನು ಗೌರಸುತ್ತೇವೆ‘ ಎಂದು ರಕ್ಷಣಾ ಸಚಿವರು ಹೇಳಿದರು.
ಭಾರತದ ಮಿಲಿಟರಿ ಶಕ್ತಿಯನ್ನು ವೃದ್ಧಿಸಲು ಮತ್ತು ದೇಶೀಯ ಶಸ್ತ್ರಾಸ್ತ್ರಗಳ ಉತ್ಪಾದನೆ ಹೆಚ್ಚಿಸಲು ಉತ್ತೇಜನ ನೀಡಬೇಕಿದೆ ಎಂದರು.
ಯುದ್ಧ ನಿಗ್ರಹಿಸುವಂತಹ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಮೂಲಕ ಶಾಂತಿ ಸ್ಥಾಪನೆ ಸಾಧ್ಯ. ಈ ನಿಟ್ಟಿನಲ್ಲಿ ದೇಶೀಯ ಶಸ್ತ್ರಾಸ್ತ್ರಗಳ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ಭಾರತ ಯುದ್ಧ ನಿಗ್ರಹಿಸುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.
ಮೇ 6ರಿಂದ ಪೂರ್ವ ಲಡಾಖ್ನಲ್ಲಿ ಭಾರತ– ಚೀನಾ ನಡುವೆ ಸಂಘರ್ಷ ಆರಂಭವಾಯಿತು. ಗಡಿ ಸಂಘರ್ಷ ಶಮನದ ಸಂಬಂಧ ಎರಡೂ ದೇಶಗಳ ಕಡೆಯಿಂದ ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳು ನಡೆದಿವೆ. ಶುಕ್ರವಾರ ಭಾರತ ಮತ್ತು ಚೀನಾ ನಡುವೆ ಎಂಟನೇ ಸುತ್ತಿನ ಕಮಾಂಡರ್ ಮಟ್ಟದ ಮಾತುಕತೆ ನಡೆಯುವ ಸಾಧ್ಯತೆ ಇದೆ.