ಅಂಬಾಲ: ಭಾರತವು ಅಕ್ರಮ ವಲಸಿಗರು ಬಂದು ನೆಲೆಸುವ ಧರ್ಮಶಾಲೆಯಲ್ಲ ಎಂದು ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಹೇಳಿಕೆ ನೀಡಿದ್ದಾರೆ.
ಅಲ್ಲದೆ ಹರಿಯಾಣದಲ್ಲಿ ವಾಸಿಸುತ್ತಿರುವ ರೋಹಿಂಗ್ಯಾ ಸಮುದಾಯದವರ ಬಗ್ಗೆ ಮಾಹಿತಿ ಕಲೆ ಹಾಕಲಾಗುವುದು ಎಂದು ಹೇಳಿದ್ದಾರೆ.
ಜಮ್ಮುವಿನಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ 168 ರೋಹಿಂಗ್ಯಾಗಳನ್ನು ಪತ್ತೆ ಹಚ್ಚಿದ ಅಧಿಕಾರಿಗಳು ಜೈಲಿಗೆ ಅಟ್ಟಿರುವ ಬೆನ್ನಲ್ಲೇ ಹರಿಯಾಣ ಸಚಿವರು ಇಂತಹದೊಂದು ಹೇಳಿಕೆ ನೀಡಿದ್ದಾರೆ.
ಅನೇಕ ರೋಹಿಂಗ್ಯಾ ವಲಸಿಗರು ಜಮ್ಮು, ಹೈದರಾಬಾದ್, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಹರಿಯಾಣದ ಮೇವತ್ನಲ್ಲಿ ರೋಹಿಂಗ್ಯಾಗಳು ನೆಲೆಸಿದ್ದಾರೆ ಎಂದು ವರದಿಗಳು ಸೂಚಿಸುತ್ತಿವೆ.
ರೋಹಿಂಗ್ಯಾಗಳ ಬಗ್ಗೆ ನಾವು ಮಾಹಿತಿಯನ್ನು ಸಂಗ್ರಹಿಸುತ್ತಿದ್ದೇವೆ. ಯಾರು ಬೇಕಾದರೂ ಇಲ್ಲಿ ಬಂದು ನೆಲೆಸುವುದಕ್ಕೆ ನಮ್ಮ ದೇಶ ಧರ್ಮಶಾಲೆಯಲ್ಲ ಎಂದು ಅನಿಲ್ ವಿಜ್ ಹೇಳಿದರು.
ಕುತೂಹಲವೆಂಬಂತೆ, ಜಮ್ಮುವಿನಲ್ಲಿ ಬಂಧಿತ ರೋಹಿಂಗ್ಯಾ ನಿರಾಶ್ರಿತರನ್ನು ತಕ್ಷಣ ಬಿಡುಗಡೆ ಮಾಡಬೇಕು ಅತ್ತು ಕೇಂದ್ರ ಸರ್ಕಾರವು ಗಡಿ ಪಾರು ಮಾಡುವ ಯಾವುದೇ ಆದೇಶವನ್ನು ತಡೆಯಬೇಕು ಎಂದು ಆಗ್ರಹಿಸಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ.