ಕೊಲ್ಕತ್ತಾ: ಸರದಿಯ ಆಧಾರದ ಮೇಲೆ ಭಾರತಕ್ಕೆ ನಾಲ್ಕು ರಾಜಧಾನಿಗಳ ಅಗತ್ಯವಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.
ಕೊಲ್ಕತ್ತಾದಲ್ಲಿ ಶನಿವಾರ ನಡೆದ ನೇತಾಜಿ ಸುಭಾಷ್ಚಂದ್ರ ಬೋಸ್ ಅವರ 125ನೇ ಜನ್ಮ ವಾರ್ಷಿಕೋತ್ಸವದಲ್ಲಿ ಮಮತಾ ಮಾತನಾಡಿದ್ದಾರೆ. ' ಸರದಿಯ ಆಧಾರದಲ್ಲಿ ಭಾರತಕ್ಕೆ ನಾಲ್ಕು ರಾಜಧಾನಿ ಇರಬೇಕೆಂದು ನಾನು ನಂಬುತ್ತೇನೆ. ಬ್ರಿಟಿಷರು ಕೊಲ್ಕತ್ತಾ ಮೂಲಕ ಇಡೀ ರಾಷ್ಟ್ರವನ್ನು ಆಳಿದ್ದರು. ಇಡೀ ರಾಷ್ಟ್ರಕ್ಕೆ ಏಕೆ ಒಂದೇ ರಾಜಧಾನಿ ಇರಬೇಕು?' ಎಂದು ಮಮತಾ ಪ್ರಶ್ನೆ ಮಾಡಿದ್ದಾರೆ.
I believe that India must have 4 rotating capitals. The English ruled the entire country from Kolkata. Why should there be only one capital city in our country: West Bengal CM Mamata Banerjee pic.twitter.com/ifOoFXah9g
ನೇತಾಜಿ 'ಇಂಡಿಯನ್ ನ್ಯಾಷನಲ್ ಆರ್ಮಿ'ಯನ್ನು ಕಟ್ಟಿದಾಗ, ಅದರಲ್ಲಿ ಗುಜರಾತ್, ಬಂಗಾಳ, ತಮಿಳುನಾಡಿನ ಜನರು ಸೇರಿದಂತೆ ಎಲ್ಲರನ್ನು ಸೇರಿಸಿಕೊಂಡಿದ್ದರು. ಅವರು ಬ್ರಿಟಿಷರ ಒಡೆದು ಆಳುವ ನೀತಿಯ ವಿರುದ್ಧವಾಗಿ ಗಟ್ಟಿಯಾಗಿ ನಿಂತಿದ್ದರು ಎಂದು ಅವರು ಹೇಳಿದರು.
'ಸುಭಾಷ್ ಚಂದ್ರ ಬೋಷ್ ಅವರ ಜನ್ಮ ವಾರ್ಷಿಕೋತ್ಸವವನ್ನು ಎಂದಿಗೂ ಆಚರಿಸದ ಕೇಂದ್ರ ಸರ್ಕಾರದ ನಿರ್ಧಾರದ ವಿಚಾರವಾಗಿ ನಾನು ಭಿನ್ನಾಭಿಪ್ರಾಯ ಹೊಂದಿದ್ದೇನೆ. ನೇತಾಜಿ ಹುಟ್ಟುಹಬ್ಬದ ದಿನಕ್ಕೆ ರಾಷ್ಟ್ರೀಯ ರಜೆ ಘೋಷಿಸಬೇಕು,' ಎಂದೂ ಅವರು ಆಗ್ರಹಿಸಿದ್ದಾರೆ.
ಪರಾಕ್ರಮ ದಿನ ಬೇಡ, ದೇಶನಾಯಕ ದಿನ ಬೇಕು
ನೇತಾಜಿ ಜನ್ಮ ದಿನಾಚರಣೆಯನ್ನು ಪರಾಕ್ರಮ ದಿನ ಎಂದು ಆಚರಿಸುವುದಾಗಿ ಕೇಂದ್ರ ಹೇಳಿದೆ. ಆದರೆ, ಈ ಬಗ್ಗೆ ಪಶ್ಚಿಮ ಬಂಗಾಳವನ್ನು ಕೇಂದ್ರ ಒಂದು ಮಾತು ಕೇಳಿಲ್ಲ. ನಾವು ಈ ದಿನವನ್ನು ದೇಶನಾಯಕನ ದಿನವಾಗಿ ಆಚರಿಸಲಿಚ್ಚಿಸುತ್ತೇವೆ ಎಂದು ಮಮತಾ ತಿಳಿಸಿದರು.