ನವದೆಹಲಿ: ಭಾರತವು ಮಧ್ಯಂತರ ಶ್ರೇಣಿಯ ಕ್ಷಿಪಣಿ 'ಅಗ್ನಿ–4' ಪರೀಕ್ಷೆಯನ್ನು ಒಡಿಶಾದ ಎಪಿಜೆ ಅಬ್ದುಲ್ ಕಲಾಂ ದ್ವೀಪದಲ್ಲಿ ಸೋಮವಾರ ಯಶಸ್ವಿಯಾಗಿ ನಡೆಸಿದೆ.
ಇದು ದೇಶದ ರಕ್ಷಣಾ ಸಾಮರ್ಥ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ಮಹತ್ವದ ಸಂಗತಿ ಎನ್ನಲಾಗಿದ್ದು,ಈ ಸಂಬಂಧ ರಕ್ಷಣಾ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ. ರಾತ್ರಿ 7.30ಕ್ಕೆ ಪರೀಕ್ಷೆ ನಡೆಸಲಾಯಿತು ಎಂದು ತಿಳಿಸಿದೆ.
ಎದುರಾಳಿಗಳ ಆಕ್ರಮಣವನ್ನು ತಡೆಯುವ ಸಾಮರ್ಥ್ಯವನ್ನು ಭಾರತವು ಹೊಂದಿದೆ ಎಂಬುದನ್ನು ಈ ಪರೀಕ್ಷೆಯು ಸಾಬೀತು ಮಾಡುತ್ತದೆ ಎಂದೂ ಹೇಳಿದೆ.
ಅಣ್ವಸ್ತ್ರ ಸಿಡಿತಲೆಯನ್ನು ಹೊತ್ತೊಯ್ಯಬಲ್ಲ ಹಾಗೂ 4,000 ಕಿ.ಮೀ. ದೂರದ ಗುರಿ ತಲುಪಬಲ್ಲ ಸಾಮರ್ಥ್ಯವನ್ನು ಈ ಕ್ಷಿಪಣಿ ಹೊಂದಿದೆ.