ನವದೆಹಲಿ: ‘ಬ್ರಿಟನ್ನಲ್ಲಿ ನಡೆದ ಜನಾಂಗೀಯ ನಿಂದನೆ ಮತ್ತು ಸೈಬರ್ ಬೆದರಿಕೆಗೆ ಸಂಬಂಧಿಸಿದಂತಹ ಪ್ರಕರಣಗಳನ್ನು ಭಾರತ ಅಗತ್ಯವಿದ್ದಾಗ ಕೈಗೆತ್ತಿಕೊಳ್ಳಲಿದೆ‘ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜಯಶಂಕರ್ ಸೋಮವಾರ ರಾಜ್ಯಸಭೆಗೆ ತಿಳಿಸಿದರು.
‘ಭಾರತ, ಮಹಾತ್ಮ ಗಾಂಧಿಯವರ ಜನ್ಮಭೂಮಿ‘ ಎಂದು ಬಣ್ಣಿಸಿದ ಸಚಿವರು, ‘ನಮ್ಮ ದೇಶ ಎಂದಿಗೂ ಜನಾಂಗೀಯ ಭೇದದಂತಹ ವಿಚಾರಗಳ ಬಳಿ ಸುಳಿಯುವುದಿಲ್ಲ‘ ಎಂದರು.
ಸೈಬರ್ ಬೆದರಿಕೆ ಮತ್ತು ಜನಾಂಗೀಯ ನಿಂದನೆಗೆ ಸಂಬಂಧಿಸಿದಂತೆ ಬ್ರಿಟನ್ನ ಆಕ್ಸ್ಫರ್ಡ್ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ಭಾರತೀಯ ಮೂಲದ ರಶ್ಮಿ ಸಾಮಂತ್ ಅವರು ರಾಜೀನಾಮೆ ನೀಡಿರುವ ಕುರಿತು ರಾಜ್ಯಸಭೆ ಕಲಾಪದ ‘ಶೂನ್ಯ ವೇಳೆ‘ಯಲ್ಲಿ ಬಿಜೆಪಿ ಸದಸ್ಯ ಅಶ್ವನಿ ವೈಷ್ಣವ್ ಕಳವಳ ವ್ಯಕ್ತಪಡಿಸಿದರು.
ಇದಕ್ಕೆ ಪ್ರಕ್ರಿಯಿಸಿದ ಸಚಿವ ಜೈಶಂಕರ್, ‘ಈ ವಿಚಾರದಲ್ಲಿ ಸದಸ್ಯರ ಅಭಿಪ್ರಾಯವನ್ನು ಗಮನಿಸಿದ್ದೇನೆ. ಭಾರತ, ಬ್ರಿಟನ್ನೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ. ಇಂಥ ವಿಷಯಗಳನ್ನು ಅಗತ್ಯವಿದ್ದಾಗ ಭಾರತ ಕೈಗೆತ್ತಿಕೊಳ್ಳಲಿದೆ‘ ಎಂದು ಸಚಿವರು ಭರವಸೆ ನೀಡಿದರು.
ಭಾರತ ಮೂಲದ ರಶ್ಮಿ ಸಾಮಂತ್ ಅವರು, ಕಳೆದ ತಿಂಗಳು, ಬ್ರಿಟನ್ನ ಆಕ್ಸ್ಫರ್ಡ್ ಯೂನಿವರ್ಸಿಟಿ ವಿದ್ಯಾರ್ಥಿ ಸಂಘಕ್ಕೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಧ್ಯಕ್ಷರಾಗಿ ಆಯ್ಕೆಯಾದ ಐದು ದಿನಗಳಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.