ಮುಂಬೈ: ಕಡಲ ಭದ್ರತೆಗೆ ಸಂಬಂಧಿಸಿದ ಸಹಭಾಗಿತ್ವಕ್ಕಾಗಿ ನೆರೆಯ ದೇಶಗಳು ಭಾರತೀಯ ನೌಕಾಪಡೆಗೇ ಆದ್ಯತೆ ನೀಡುತ್ತವೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಬುಧವಾರ ಹೇಳಿದರು.
ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ನೌಕಾಪಡೆಯ 22ನೇ ‘ಮಿಸೈಲ್ ವೆಸೆಲ್ ಸ್ಕ್ವ್ಯಾಡ್ರನ್’ ಎಂಬ ನೌಕಾತಂಡಕ್ಕೆ ‘ರಾಷ್ಟ್ರಪತಿಗಳ ಗೌರವ’ ಪ್ರದಾನ ಮಾಡಿ, ಅವರು ಮಾತನಾಡಿದರು.
‘ಈ ನೌಕಾತಂಡಗಳು ಕೇವಲ ದೇಶದ ಸಾಗರ ಗಡಿಯ ರಕ್ಷಣೆಯಲ್ಲಿ ಮಾತ್ರ ನಿರತವಾಗಿಲ್ಲ. ಓಮಾನ್ ಹಾಗೂ ಇರಾನ್ ಕೊಲ್ಲಿಗಳಲ್ಲಿ ನಿಯೋಜನೆಗೊಂಡ ಸಂದರ್ಭದಲ್ಲಿ ಕಡಲ್ಗಳ್ಳತನ ನಿಗ್ರಹ ಕಾರ್ಯಾಚರಣೆಗಳಲ್ಲಿಯೂ ಗಮನಾರ್ಹ ಸೇವೆ ಸಲ್ಲಿಸಿವೆ’ ಎಂದು ಹೇಳಿದರು.
‘ದೇಶ ಹಾಗೂ ನೆರೆ ರಾಷ್ಟ್ರಗಳಲ್ಲಿ ನೈಸರ್ಗಿಕ ವಿಪತ್ತು ಸಂಭವಿಸಿದಾಗ ಭಾರತೀಯ ನೌಕಾಪಡೆ ರಕ್ಷಣಾ ಕಾರ್ಯಗಳಲ್ಲಿ ತೊಡಗಿ, ಸಲ್ಲಿಸಿದ ಸೇವೆ ಅದ್ಭುತ. ಕೋವಿಡ್–19 ಪಿಡುಗಿನ ಸಂದರ್ಭದಲ್ಲಿ ವಿವಿಧ ದೇಶಗಳಿಂದ ಭಾರತೀಯರನ್ನು ಕರೆತರುವಲ್ಲಿಯೂ ಮಹತ್ವದ ಪಾತ್ರ ವಹಿಸಿತ್ತು’ ಎಂದು ಶ್ಲಾಘಿಸಿದರು.