ನವದೆಹಲಿ: ಯಾವುದೇ ಕಾರಣಕ್ಕೂ ಭಾರತೀಯ ರೈಲ್ವೆಯನ್ನು ಖಾಸಗೀಕರಣಗೊಳಿಸುವುದಿಲ್ಲ ಎಂದು ರೈಲ್ವೆ ಸಚಿವ ಪೀಯೂಷ್ ಗೋಯಲ್ ಮಂಗಳವಾರ ಸ್ಪಷ್ಟಪಡಿಸಿದರು.
ರೈಲ್ವೆಯ ಬೇಡಿಕೆಗಳು ಹಾಗೂ ಅನುದಾನ ಕುರಿತಂತೆ ಸಂಸತ್ನಲ್ಲಿ ನಡೆದ ಚರ್ಚೆ ವೇಳೆ ಈ ಮಾಹಿತಿ ನೀಡಿದ ಅವರು, ‘ರೈಲ್ವೆಯು ಪ್ರತಿಯೊಬ್ಬ ಭಾರತೀಯನ ಸ್ವತ್ತು. ಅದು ಹಾಗೆಯೇ ಇರಲಿದೆ. ಭಾರತ ಸರ್ಕಾರದ ಒಡೆತನದಲ್ಲಿಯೇ ಇರಲಿದೆ’ ಎಂದು ಹೇಳಿದರು.
‘2019–20ನೇ ಹಣಕಾಸು ವರ್ಷದಲ್ಲಿ ರೈಲ್ವೆಗೆ ₹ 1.5 ಲಕ್ಷ ಕೋಟಿ ಅನುದಾನ ಒದಗಿಸಲಾಗಿತ್ತು. 2021–22ನೇ ಹಣಕಾಸು ವರ್ಷದಲ್ಲಿ ₹ 2.15 ಲಕ್ಷ ಕೋಟಿ ಅನುದಾನ ತೆಗೆದಿರಿಸಲಾಗಿದೆ’ ಎಂದೂ ಹೇಳಿದರು.
‘ರೈಲು ಅಪಘಾತಗಳಿಂದಾಗಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಪ್ರಯಾಣಿಕರ ಸಾವು ಸಂಭವಿಸಿಲ್ಲ. ಇನ್ನೊಂದೆಡೆ, ಪ್ರಯಾಣಿಕರ ಸುರಕ್ಷತೆಗೆ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ’ ಎಂದರು.