ಪ್ರಧಾನಿಗೆ ಭಾರತೀಯರಲ್ಲ, ರಾಜಕೀಯ ಮುಖ್ಯ: ಪ್ರಿಯಾಂಕಾ ಗಾಂಧಿ

ನವದೆಹಲಿ: ಕೋವಿಡ್ ಸಾಂಕ್ರಾಮಿಕ ಸನ್ನಿವೇಶವನ್ನು ನಿರ್ವಹಿಸಿದ ರೀತಿ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅವರಿಗೆ ಭಾರತೀಯರು ಮುಖ್ಯವಲ್ಲ, ರಾಜಕೀಯ ಮುಖ್ಯ ಎಂದು ಟೀಕಿಸಿದ್ದಾರೆ.
ಜಿಮ್ಮೆದಾರ್ ಕೌನ್(ಜವಾಬ್ದಾರರು ಯಾರು) ಅಭಿಯಾನದ ಮೂಲಕ ಕೋವಿಡ್ ನಿರ್ವಹಣೆ ಬಗ್ಗೆ ಸರ್ಕಾರಕ್ಕೆ ಪ್ರಶ್ನೆಗಳನ್ನು ಹಾಕುತ್ತಿರುವ ಅವರು, ಕೊರೊನಾ ಸಮಯದಲ್ಲಿ ಇಡೀ ಜಗತ್ತು ಪ್ರಧಾನ ಮಂತ್ರಿಯ ‘ಆಡಳಿತದಲ್ಲಿ ಅಸಮರ್ಥತೆ’ ಯನ್ನು ಕಂಡಿದೆ ಎಂದು ಟೀಕಿಸಿದ್ಧಾರೆ.
‘ಕೊರೊನಾ ಸಂದರ್ಭದಲ್ಲಿ ಹಿಂದೆ ಸರಿದು ಕೆಟ್ಟದ್ದು ಹಾದುಹೋಗಲು ಕಾಯುತ್ತಿದ್ದರು. ಭಾರತದ ಪ್ರಧಾನಿ ಹೇಡಿಯಂತೆ ವರ್ತಿಸಿದ್ದಾರೆ. ಅವರು ನಮ್ಮ ದೇಶವನ್ನು ನಿರಾಸೆಗೊಳಿಸಿದ್ದಾರೆ ’ ಎಂದು ಪ್ರಿಯಾಂಕಾ ಗಾಂಧಿ ತಮ್ಮ ಫೇಸ್ಬುಕ್, ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
If only...#ZimmedarKaun pic.twitter.com/Qy5FpTl9iP
— Priyanka Gandhi Vadra (@priyankagandhi) June 12, 2021
‘ಭಾರತೀಯರು ಅವರಿಗೆ ಮುಖ್ಯವಲ್ಲ. ರಾಜಕೀಯ ಮುಖ್ಯ. ಸತ್ಯದ ಬಗ್ಗೆ ಅವರಿಗೆ ಕಾಳಜಿ ಇಲ್ಲ, ಅಪಪ್ರಚಾರ ಮಾಡುತ್ತಾರೆ, ’ಜನರು ಪ್ರಧಾನ ಮಂತ್ರಿ ಗಳನ್ನು ಜಿಮ್ಮೆದಾರ್ ಕೌನ್ (ಯಾರು ಜವಾಬ್ದಾರರು)' ಎಂದು ಕೇಳುವ ಸಮಯ ಬಂದಿದೆ ಎಂದು ಪ್ರತಿಪಾದಿಸಿದ್ದಾರೆ.
ಬಿಕ್ಕಟ್ಟಿನಲ್ಲಿ ಉತ್ತಮ ಆಡಳಿತವೆಂದರೆ, ಸತ್ಯವನ್ನು ಎದುರಿಸುವುದು, ಜವಾಬ್ದಾರಿಯನ್ನು ವಹಿಸಿಕೊಳ್ಳುವುದು ಮತ್ತು ಕ್ರಮ ತೆಗೆದುಕೊಳ್ಳುವುದು ಎಂದು ಅವರು ಹೇಳಿದ್ದಾರೆ.
‘ದುರದೃಷ್ಟವಶಾತ್, ಮೋದಿ ಸರ್ಕಾರ ಇವುಗಳಲ್ಲಿ ಯಾವುದನ್ನೂ ಮಾಡಲಿಲ್ಲ. ಬದಲಿಗೆ, ಸಾಂಕ್ರಾಮಿಕ ರೋಗದ ಆರಂಭದಿಂದಲೂ, ಸತ್ಯವನ್ನು ಮರೆಮಾಚಲು ಮತ್ತು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಎಲ್ಲ ಪ್ರಯತ್ನಗಳನ್ನು ಮಾಡಿತು’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆರೋಪಿಸಿದರು.
‘ಇದರ ಪರಿಣಾಮವಾಗಿ, ಎರಡನೇ ಅಲೆಯು ದೇಶಕ್ಕೆ ಭೀಕರವಾಗಿ ಅಪ್ಪಳಿಸಿತು. ಸರ್ಕಾರವು ನಿಷ್ಕ್ರಿಯ ಸ್ಥಿತಿಗೆ ಇಳಿಯಿತು. ಈ ನಿಷ್ಕ್ರಿಯತೆಯು ವೈರಸ್ ಹೆಚ್ಚು ಹರಡಲು ಮತ್ತು ಹೇಳಲಾಗದ ದುಃಖಕ್ಕೆ ಕಾರಣವಾಯಿತು’ ಎಂದು ಅವರು ಕಿಡಿ ಕಾರಿದ್ದಾರೆ.
ಕೋವಿಡ್ ಹರಡುವಿಕೆಯ ಹಿನ್ನೆಲೆಯಲ್ಲಿ ಪ್ರಧಾನಿ ಕೈಗೊಳ್ಳಬೇಕಾದ ಕ್ರಮಗಳ ಸರಣಿಯನ್ನು ಪ್ರಿಯಾಂಕಾ ಗಾಂಧಿ ಪಟ್ಟಿ ಮಾಡಿದ್ದಾರೆ.
‘ಭಾರತ ಮತ್ತು ಪ್ರಪಂಚದಾದ್ಯಂತದ ತಜ್ಞರು ನೀಡಿದ ಅಸಂಖ್ಯಾತ ಎಚ್ಚರಿಕೆಗಳನ್ನು ಅರಿತು ಪ್ರಧಾನ ಮಂತ್ರಿ ನಡೆದುಕೊಂಡಿದ್ದರೆ, ತಮ್ಮದೇ ಆದ ‘ಸಶಕ್ತ ಗುಂಪು’ಗಳ ಶಿಫಾರಸುಗಳನ್ನು ಆಲಿಸಿದ್ದರೆ ಅಥವಾ ಆರೋಗ್ಯ ಸಂಸದೀಯ ಸಮಿತಿಯ ಮಾತು ಆಲಿಸಿದ್ದರೆ ನಾವು ಹಾಸಿಗೆಗಳು, ಆಮ್ಲಜನಕ ಮತ್ತು ಔಷಧಿಗಳ ಭಯಾನಕ ಕೊರತೆಯನ್ನು ಎದುರಿಸುತ್ತಿರಲಿಲ್ಲ,’ ಎಂದು ಅವರು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.