ಮುಂಬೈ: ‘ಕೊರೊನಾ ವೈರಸ್ನ ರೂಪಾಂತರಿತ ಹೊಸ ತಳಿ ರಾಜ್ಯದಲ್ಲಿ ಕಾಣಿಸಿಕೊಂಡಿರುವ ಸಂಶಯವಿದೆ. ಅಲ್ಪ ಸಮಯದಲ್ಲಿಯೇ ಸೋಂಕು ಜನರಿಗೆ ಹರಡುತ್ತಿರಬಹುದು’ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೋಪೆ ಬುಧವಾರ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಭಾವ್ಯ ಹೊಸ ತಳಿಯ ವೈರಸ್ ಕುರಿತು ನ್ಯಾಷನಲ್ ಸೆಂಟರ್ ಆಫ್ ಡಿಸೀಸ್ ಕಂಟ್ರೋಲ್ (ಎನ್ಸಿಡಿಎಸ್) ಹೆಚ್ಚಿನ ಮಾಹಿತಿ ನೀಡಬೇಕು. ಈ ವೈರಸ್ನಿಂದ ಹರಡುವ ಸೋಂಕಿಗೆ ಚಿಕಿತ್ಸೆ ಬಗ್ಗೆಯೂ ತಿಳಿಸಬೇಕು’ ಎಂದು ಒತ್ತಾಯಿಸಿದರು.
‘ಶಂಕಿತ ಹೊಸ ತಳಿ ವೈರಸ್ನ ಸೋಂಕು ಹೊಂದಿರುವವರ ಗಂಟಲ ದ್ರವದ ಮಾದರಿಗಳನ್ನು ಎನ್ಸಿಡಿಎಸ್ಗೆ ಕಳುಹಿಸಲಾಗಿದೆ’ ಎಂದೂ ತೋಪೆ ಹೇಳಿದರು.
‘ಸದ್ಯ ರಾಜ್ಯದಲ್ಲಿ ಕೋವಿಡ್ ಲಸಿಕೆಯ 14 ಲಕ್ಷ ಡೋಸ್ಗಳಿವೆ. ಇವು ಇನ್ನು 3 ದಿನಗಳ ವರೆಗೆ ಸಾಕಾಗಲಿವೆ. ವಾರಕ್ಕೆ 40 ಲಕ್ಷ ಡೋಸ್ಗಳಂತೆ ಲಸಿಕೆ ಪೂರೈಸಲು ಬೇಡಿಕೆ ಸಲ್ಲಿಸಲಾಗಿದೆ’ ಎಂದರು.
‘ಕೇಂದ್ರ ಸರ್ಕಾರ ನಮಗೆ ಲಸಿಕೆಯನ್ನು ಪೂರೈಸುತ್ತಿಲ್ಲ ಎಂದು ನಾನು ಹೇಳುವುದಿಲ್ಲ. ಆದರೆ, ತ್ವರಿತವಾಗಿ ಪೂರೈಕೆಯಾಗುತ್ತಿಲ್ಲ’ ಎಂದರು. ‘ಲಸಿಕೆಯ ಕೊರತೆಯಿಂದಾಗಿ ಹಲವೆಡೆ ಲಸಿಕಾ ಕೇಂದ್ರಗಳನ್ನು ಮುಚ್ಚಲಾಗುತ್ತಿದೆ’ ಎಂದೂ ಹೇಳಿದರು.