ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಿಯನ್‌ ವಾಲಾಬಾಗ್‌ ನವೀಕರಣ, ಹುತಾತ್ಮರಿಗೆ ಮಾಡಿದ ಅವಮಾನ: ರಾಹುಲ್ ಗಾಂಧಿ

Last Updated 31 ಆಗಸ್ಟ್ 2021, 5:19 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರ ‘ಜಲಿಯಾನ್‌ವಾಲಾ ಬಾಗ್‌ ಸ್ಮಾರಕ‘ವನ್ನು ಪುನರುಜ್ಜೀವನಗೊಳಿಸಿರುವುದು ‘ಹುತಾತ್ಮರಿಗೆ ಮಾಡಿದ ಅವಮಾನ‘ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದು, ‘ಹುತಾತ್ಮ‘ ಎಂಬುದರ ಅರ್ಥ ತಿಳಿಯದ ವ್ಯಕ್ತಿ ಮಾತ್ರ ಹೀಗೆ ಹುತಾತ್ಮರಿಗೆ ಅವಮಾನ ಮಾಡಲು ಸಾಧ್ಯ‘ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ನವೀಕೃತ ಜಲಿಯನ್ ವಾಲಾಬಾಗ್ ಸ್ಮಾರಕವನ್ನು ದೇಶಕ್ಕೆ ಸಮರ್ಪಿಸಿದ ನಂತರ, ರಾಹುಲ್‌ ಗಾಂಧಿ ಸರ್ಕಾರದ ವಿರುದ್ಧ ಈ ರೀತಿ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಹಿಂದಿಯಲ್ಲಿ ಟ್ವೀಟ್‌ ಮಾಡಿರುವ ಅವರು, ಸ್ಮಾರಕದ ನವೀಕರಣದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ವರದಿಯನ್ನು ಟ್ಯಾಗ್ ಮಾಡಿದ್ದಾರೆ. ‘ಹುತಾತ್ಮ ಎಂಬುದರ ಅರ್ಥ ತಿಳಿಯದವರು ಮಾತ್ರ ಜಲಿಯನ್ ವಾಲಾ ಬಾಗ್ ಹುತಾತ್ಮರನ್ನು ಹೀಗೆ ಅವಮಾನ ಮಾಡಲು ಸಾಧ್ಯ‘ ಎಂದು ಹೇಳಿದ್ದಾರೆ.

‘ನಾನು ಹುತಾತ್ಮರ ಮಗ. ಹುತಾತ್ಮರಿಗೆ ಮಾಡಿರುವ ಅವಮಾನವನ್ನು ನಾನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಇಂಥ ಕ್ರೌರ್ಯದ ವಿರುದ್ಧ ನಾವೆಲ್ಲರೂ ಹೋರಾಡುತ್ತೇವೆ‘ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಶನಿವಾರ ನವೀಕೃತ ಜಲಿಯಾನ್‌ ವಾಲಾಬಾಗ್‌ ಸ್ಮಾರಕವನ್ನು ಉದ್ಘಾಟಿಸಿ, ‘ಇತಿಹಾಸವನ್ನು ರಕ್ಷಿಸುವುದು ದೇಶದ ಕರ್ತವ್ಯ‘ ಎಂದು ಒತ್ತಿ ಹೇಳಿದ್ದರು. ಹಿಂದಿನ ಘಟನೆಗಳು ‘ನಮಗೆ ಅನೇಕ ಪಾಠಗಳನ್ನು ಕಲಿಸುತ್ತವೆ. ಹಾಗಯೇ, ದೇಶವನ್ನು ಮುನ್ನಡೆಸಲು ನಿರ್ದೇಶನ ನೀಡುತ್ತವೆ‘ ಎಂದು ಹೇಳಿದ್ದರು.

ಇದೇ ವೇಳೆ ಮೋದಿಯವರು ಆನ್‌ಲೈನ್‌ ಮೂಲಕ ಸ್ಮಾರಕದಲ್ಲಿ ಡಿಜಿಟಲ್‌ ವಸ್ತುಪ್ರದರ್ಶನದ ಗ್ಯಾಲರಿಗಳನ್ನು ಉದ್ಘಾಟಿಸಿದರು. ಸರ್ಕಾರವು ಈ ಸಂಕೀರ್ಣವನ್ನು ಮೇಲ್ದರ್ಜೆಗೇರಿಸಲು ಕೈಗೊಂಡ ಬಹು ಅಭಿವೃದ್ಧಿ ಉಪಕ್ರಮಗಳನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT