ಹೈದರಾಬಾದ್: ತೆಲಂಗಾಣ ಕಾರ್ಮಿಕರ ಕಲ್ಯಾಣ ಸಚಿವ, ಬಿಆರ್ಎಸ್ ಪ್ರಮುಖ ನಾಯಕ ಮಲ್ಲಾ ರೆಡ್ಡಿ ಮತ್ತು ಅವರ ಕುಟುಂಬ ಸದಸ್ಯರಿಗೆ ಸೇರಿದ ನಿವಾಸಗಳಲ್ಲಿ ಆದಾಯ ತೆರಿಗೆ ಇಲಾಖೆ (ಐಟಿ) ಮಂಗಳವಾರ ಶೋಧ ಕಾರ್ಯಾಚರಣೆ ನಡೆಸಿದೆ.
ರೆಡ್ಡಿ ಅವರ ತೆರಿಗೆ ದಾಖಲೆಗಳು, ಅವರು ಮತ್ತು ಅವರ ಕುಟುಂಬ ಸದಸ್ಯರಿಗೆ ಸೇರಿದ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದ ತೆರಿಗೆ ದಾಖಲೆಗಳನ್ನು ಐಟಿ ಅಧಿಕಾರಿಗಳು ಪರಿಶೀಲಿಸಿದರು ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಸಂಪುಟದಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಯಿಂದ ತನಿಖೆಗೊಳಗಾಗುತ್ತಿರುವ ಎರಡನೆಯ ಸಚಿವರು ಇವರು. ಇದಕ್ಕೂ ಮೊದಲು ಹಣ ಅಕ್ರಮ ವರ್ಗಾವಣೆ ಪ್ರಕರಣವೊಂದರಲ್ಲಿ ಸಚಿವ ಗಂಗುಲ ಕಮಲಾಕರ್ ಅವರಿಗೆ ಸೇರಿದ್ದ ಆಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು.