ಜಮ್ಮು: ಬಿಜೆಪಿಯ ಜನಪ್ರಿಯತೆಯಿಂದ ಹತಾಶರಾಗಿರುವ ಪಾಕಿಸ್ತಾನ ಮೂಲದ ಉಗ್ರರು ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಕದಡಲು ಪಿತೂರಿ ನಡೆಸುತ್ತಿದ್ದಾರೆ ಎಂದು ಪಕ್ಷದ ಜಮ್ಮು ಮತ್ತು ಕಾಶ್ಮೀರ ಘಟಕದ ಅಧ್ಯಕ್ಷ ರವೀಂದರ್ ರೈನಾ ಶನಿವಾರ ಆರೋಪಿಸಿದ್ದಾರೆ.
ಭಯೋತ್ಪಾದಕ ಸಂಘಟನೆಯಿಂದ ತಮಗೆ ಬೆದರಿಕೆ ಇರುವುದಾಗಿ ಹೇಳಿರುವ ಅವರು, ಈ ಕುರಿತು ಗುಪ್ತಚರ ಸಂಸ್ಥೆಗಳು ಎಚ್ಚರಿಸಿವೆ ಎಂದೂ ಹೇಳಿದ್ದಾರೆ.
ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ಉಗ್ರ ಸಂಘಟನೆಯು ನನ್ನ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಬೆದರಿಕೆಯೊಡ್ಡಿರುವುದಾಗಿ ಗುಪ್ತಚರ ಸಂಸ್ಥೆಗಳು ತಿಳಿಸಿವೆ ಎಂದೂ ಅವರು ಹೇಳಿದ್ದಾರೆ.
ಟಿಆರ್ಎಫ್ ಸಂಘಟನೆಯು ಪಾಕಿಸ್ತಾನ ಮೂಲದ ಲಷ್ಕರ್ ಎ ತಯ್ಯಬಾದ ಅಧೀನದಲ್ಲಿರುವ ಸಂಘಟನೆಯಾಗಿದೆ.
ಕೇಂದ್ರಾಡಳಿತ ಪ್ರದೇಶದಲ್ಲಿ ಭಯೋತ್ಪಾದಕರು ಪಕ್ಷದ ಕಾರ್ಯಕರ್ತರನ್ನು ಹತ್ಯೆಗೈಯುತ್ತಿರುವುದನ್ನು ಖಂಡಿಸಿರುವ ರವೀಂದರ್, ಜನರಲ್ಲಿ ಭೀತಿ ಸೃಷ್ಟಿಸುವುದು ಉಗ್ರರ ಗುರಿ ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಎರಡು ವರ್ಷಗಳಲ್ಲಿ 23 ಕಾರ್ಯಕರ್ತರು ಹತ್ಯೆಗೀಡಾಗಿದ್ದಾರೆ ಎಂದು ಬಿಜೆಪಿ ಹೇಳಿದೆ. ಈ ತಿಂಗಳಲ್ಲಿ ಬಿಜೆಪಿ ಕಾರ್ಯಕರ್ತರಾದ ಜಾವಿದ್ ಅಹಮ್ಮದ್ ದಾರ್ ಮತ್ತು ಗುಲಾಮ್ ರಸೂಲ್ ದಾರ್ ದಂಪತಿಯನ್ನು ಉಗ್ರರು ಹತ್ಯೆ ಮಾಡಿದ್ದರು.