ಶ್ರೀನಗರ: ‘ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ನಲ್ಲಿ, ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದ ಇಬ್ಬರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ’ ಎಂದು ಪೊಲೀಸರು ಮಂಗಳವಾರ ತಿಳಿಸಿದರು.
‘ಅನಂತ್ನಾಗ್ ಜಿಲ್ಲೆಯ ಪೊಷ್ಕ್ರೀರಿ ಪ್ರದೇಶದಲ್ಲಿ ಉಗ್ರರಿದ್ದಾರೆಂಬ ಬಗ್ಗೆ ಖಚಿತ ಮಾಹಿತಿ ದೊರೆತ ನಂತರ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸಿದ್ದವು’ ಎಂದು ಅವರು ಹೇಳಿದರು.
‘ಶೋಧ ಕಾರ್ಯಚರಣೆಯ ವೇಳೆ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪ್ರತಿ ದಾಳಿ ನಡೆಸಿದ ಪಡೆಗಳು ಇಬ್ಬರು ಉಗ್ರರನ್ನು ಕೊಂದಿದ್ದಾರೆ’ ಎಂದರು.
‘ಹತ್ಯೆಯಾದವರನ್ನು ಡ್ಯಾನಿಶ್ ಭಟ್ ಅಲಿಯಾಸ್ ಕೊಕಾಬ್ ದುರೀ ಮತ್ತು ಬಶರತ್ ನಬಿ ಎಂದು ಗುರುತಿಸಲಾಗಿದೆ. ಇಬ್ಬರೂ 2021ರ ಏಪ್ರಿಲ್ 9 ರಂದು ಪ್ರಾದೇಶಿಕ ಸೈನ್ಯದ ಯೋಧ ಸಲೀಂನನ್ನು ಮತ್ತು ಮೇ 29 2021ರಂದು ಜಬ್ಲಿಪೋರಾದಲ್ಲಿ ಇಬ್ಬರು ನಾಗರಿಕರನ್ನು ಕೊಂದಿದ್ದಾರೆ’ ಎಂದು ಕಾಶ್ಮೀರ ವಲಯದಹೆಚ್ಚುವರಿ ಡಿಜಿಪಿ ವಿಜಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.