ನವದೆಹಲಿ: ‘ಅಪರಾಧಿಗಳು ಯಾರಾದರೂ ತಮ್ಮ ಅಪರಾಧವನ್ನು ಒಪ್ಪಿಕೊಳ್ಳುವುದನ್ನು ನೋಡಿದ್ದೀರಾ? ಅವರದನ್ನು (ಸೋನಿಯಾ, ರಾಹುಲ್ ಗಾಂಧಿ) ನಿರಾಕರಿಸುತ್ತಾರೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಸಂಸದ ರಾಹುಲ್ ಗಾಂಧಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿರುವ ವಿಚಾರಕ್ಕೆ ಸಂಬಂಧಿಸಿ ಅವರು ಪ್ರತಿಕ್ರಿಯಿಸಿದರು.
‘ದಾಖಲೆಗಳೇ ಸಾಕ್ಷಿಯಾಗಿವೆ. ಚಾರ್ಜ್ಶೀಟ್ ದಾಖಲಿಸಿದರೆ ನ್ಯಾಯಾಲಯದ ಮೊರೆ ಹೋಗಿ ಅದನ್ನು ರದ್ದುಪಡಿಸಿಕೊಳ್ಳಬೇಕು. ಆದರೆ ಅವರು ಜಾಮೀನು ಕೋರಿದ್ದಾರೆ. ಇದರರ್ಥ ಅವರು ತಪ್ಪಿತಸ್ಥರು ಎಂಬುದೇ ಆಗಿದೆ’ ಎಂದು ನಡ್ಡಾ ಹೇಳಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಹಾಗೂ ರಾಹುಲ್ ಗಾಂಧಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ. ಇದರ ಬೆನ್ನಲ್ಲೇ ಜೂನ್ 8ರಂದು ಇ.ಡಿ. ಕಚೇರಿಗೆ ಹೋಗುವುದಾಗಿ ಸೋನಿಯಾ ಗಾಂಧಿ ತಿಳಿಸಿದ್ದಾರೆ.