ನವದೆಹಲಿ: ‘ನ್ಯಾಯಾಧೀಶರು ತಮ್ಮ ತೀರ್ಪುಗಳಿಂದಷ್ಟೇ ಜನರಿಗೆ ಗೊತ್ತಾಗುವುದು. ನ್ಯಾಯಾಧೀಶರ ಸಾಮರ್ಥ್ಯ ಪರೀಕ್ಷಿಸುವ ಏಕೈಕ, ನಿಜವಾದ ಮಾನದಂಡವೆಂದರೆ ತೀರ್ಪುಗಳು’ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಹೇಳಿದ್ದಾರೆ.
ಜುಲೈ 4ರಂದು ನಿವೃತ್ತರಾಗಲಿರುವ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅಶೋಕ್ ಭೂಷಣ್ ಅವರಿಗೆ ವರ್ಚುವಲ್ ಮೂಲಕ ನೀಡಿದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಭೂಷಣ್ ಅವರ ತಾಯಿ ಜೂನ್ 22ರಂದು ಪ್ರಯಾಗರಾಜ್ನಲ್ಲಿ ನಿಧನರಾಗಿದ್ದು, ಕೊನೆಯ ವಿಧಿವಿಧಾನಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಅಶೋಕ್ ಭೂಷಣ್ ಹಾಜರಾಗಬೇಕಾಗಿರುವುದರಿಂದ ವಿದಾಯ ಸಮಾರಂಭವನ್ನು ಬುಧವಾರವೇ ನಡೆಸಲಾಯಿತು.
ಅಲಹಾಬಾದ್ ಹೈಕೋರ್ಟ್ನಿಂದ ಪ್ರಶಂಸಿಸಲ್ಪಟ್ಟ ನ್ಯಾಯಮೂರ್ತಿ ಭೂಷಣ್ ಅವರನ್ನು ‘ಶ್ರೇಷ್ಠ ಮನುಷ್ಯ’ ಎಂದು ಬಣ್ಣಿಸಿದ ಸಿಜೆಐ ರಮಣ ಅವರು, ಭೂಷಣ್ ಅವರ ತೀರ್ಪುಗಳು ಅವರ ‘ಲೋಕಕಲ್ಯಾಣ ಮತ್ತು ಮಾನವತಾವಾದಿ ನಡೆ’ಗೆ ಸಾಕ್ಷಿಯಾಗಿದೆ ಎಂದರು.
ವರ್ಚುವಲ್ ಸಮಾರಂಭದಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಸೇರಿದಂತೆ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ ಅಧ್ಯಕ್ಷ ವಿಕಾಸ್ ಸಿಂಗ್ ಮತ್ತು ಬಾರ್ನ ಇತರ ಸದಸ್ಯರು ಉಪಸ್ಥಿತರಿದ್ದರು.
ನ್ಯಾಯಮೂರ್ತಿ ಭೂಷಣ್ ಅವರು ಅಯೋಧ್ಯೆ ವಿವಾದ ಮತ್ತು ಆಧಾರ್ ಪ್ರಕರಣಗಳಲ್ಲಿ ತೀರ್ಪು ನೀಡಿದ ಸಂವಿಧಾನಿಕ ಪೀಠದಲ್ಲಿದ್ದರು. ಕೋವಿಡ್ 19 ಸಾಂಕ್ರಾಮಿಕ ಸಮಯದಲ್ಲಿ ವಲಸೆ ಕಾರ್ಮಿಕರ ಸಮಸ್ಯೆಗಳನ್ನು ನಿಭಾಯಿಸುವ ಪೀಠದ ಅಧ್ಯಕ್ಷತೆಯನ್ನು ಅವರು ಇತ್ತೀಚೆಗೆ ವಹಿಸಿದ್ದರು. ಭೂಷಣ್ ಅವರು ಜುಲೈ 4ರಂದು ನಿವೃತ್ತಿಯಾದ ನಂತರ, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆಯನ್ನು 33ರಿಂದ 26ಕ್ಕೆ ಇಳಿಸಲಾಗುತ್ತಿದೆ.