ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಂಗ ಸಂವಿಧಾನಕ್ಕೆ ಮಾತ್ರ ಉತ್ತರದಾಯಿ, ರಾಜಕೀಯ ಪಕ್ಷಗಳಿಗೆ ಅಲ್ಲ: ಸಿಜೆಐ ರಮಣ

ಯಾವುದೇ ರಾಜಕೀಯ ಪಕ್ಷಗಳಿಗೆ ಅಲ್ಲ– ಸುಪ್ರೀಂಕೋರ್ಟ್ ಸಿಜೆಐ ಪ್ರತಿಪಾದನೆ
Last Updated 2 ಜುಲೈ 2022, 15:27 IST
ಅಕ್ಷರ ಗಾತ್ರ

ನವದೆಹಲಿ: ‘ನ್ಯಾಯಾಂಗವು ಸಂವಿಧಾನಕ್ಕೆ ಮಾತ್ರ ಉತ್ತರದಾಯಿಯಾಗಿದೆಯೇ ವಿನಾ ಯಾವುದೇ ರಾಜಕೀಯ ಪಕ್ಷಗಳ ನಿಲುವು ಅಥವಾ ಸಿದ್ಧಾಂತಗಳಿಗೆ ಅಲ್ಲ’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ಶನಿವಾರ ಹೇಳಿದ್ದಾರೆ.

ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ಭಾರತೀಯ ಅಮೆರಿಕನ್ನರ ಒಕ್ಕೂಟ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಭಾರತದಲ್ಲಿ ಅಧಿಕಾರದಲ್ಲಿರುವ ಪ್ರತಿಯೊಂದು ಪಕ್ಷವು ಸರ್ಕಾರದ ಪ್ರತಿ ಕ್ರಮವೂ ನ್ಯಾಯಾಂಗದ ಅನುಮೋದನೆಗೆ ಅರ್ಹವಾಗಿದೆ ಎಂದು ನಂಬುತ್ತದೆ. ಅಂತೆಯೇ ವಿರೋಧ ಪಕ್ಷಗಳು ಕೂಡಾ ತಮ್ಮ ರಾಜಕೀಯ ಸ್ಥಾನ ಅಥವಾ ಸಿದ್ಧಾಂತಗಳನ್ನು ನ್ಯಾಯಾಂಗವೇ ಮುನ್ನಡೆಸಬೇಕೆಂದು ಬಯಸುತ್ತವೆ. ಆದರೆ, ನ್ಯಾಯಾಂಗವು ಸಂವಿಧಾನಕ್ಕೆ ಮಾತ್ರ ಉತ್ತರದಾಯಿಯಾಗಿದೆ’ ಎಂದು ವಿವರಿಸಿದರು.

‘ನಾವೀಗ ಸ್ವಾತಂತ್ರ್ಯದ 75ನೇ ವರ್ಷದ ಅಮೃತಮಹೋತ್ಸವದ ಆಚರಣೆಯಲ್ಲಿದ್ದೇವೆ. ಅಂತೆಯೇ ನಮ್ಮ ಗಣರಾಜ್ಯವು 72ನೇ ವರ್ಷಕ್ಕೆ ಕಾಲಿಟ್ಟಿರುವ ಸಂದರ್ಭದಲ್ಲೂ ನಾವು (ಜನರು) ಸಂವಿಧಾನವು ನಮಗೆ ವಹಿಸಿರುವ ಪಾತ್ರಗಳು ಮತ್ತು ಹೊಣೆಗಾರಿಕೆಯನ್ನು ನಿಭಾಯಿಸಲು ಕಲಿತಿಲ್ಲ ಎಂಬುದನ್ನು ನಾನಿಲ್ಲಿ ವಿಷಾದದಿಂದ ಹೇಳಬೇಕಿದೆ’ ಎಂದರು.

‘ಇಂತಹ ಆಲೋಚನಾ ಕ್ರಮಗಳ ಕಾರಣಕ್ಕಾಗಿಯೇ ರಾಜಕೀಯ ಪಕ್ಷಗಳು ಮತ್ತು ಜನರಿಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ತಿಳಿವಳಿಕೆಯ ಕೊರತೆ ಉಂಟಾಗಿದೆ. ನಾವು ಅಂದರೆ ನ್ಯಾಯಾಂಗವು ಸಂವಿಧಾನಕ್ಕೆ ಮಾತ್ರ ಉತ್ತರದಾಯಿತ್ವ ಮತ್ತು ಜವಾಬ್ದಾರರು ಎಂಬುದನ್ನು ಸ್ಪಷ್ಟಪಡಿಸುತ್ತೇನೆ. ಸಂವಿಧಾನದಲ್ಲಿ ರೂಪಿಸಲಾಗಿರುವ ಸಮತೋಲನವನ್ನು ಕಾಯ್ದುಗೊಳ್ಳಲು ಭಾರತದಲ್ಲಿ ಸಾಂವಿಧಾನಿಕ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಅಗತ್ಯವಿದೆ’ ಎಂದೂ ರಮಣ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT