ನವದೆಹಲಿ: ‘ಸುಪ್ರೀಂ ಕೋರ್ಟ್ನಲ್ಲಿ ಸದ್ಯ ಒಬ್ಬರೇ ಮಹಿಳಾ ನ್ಯಾಯಮೂರ್ತಿ ಇದ್ದಾರೆ. ಇದು, ಕಳವಳದ ಸಂಗತಿ. ಈ ಬಗ್ಗೆ ಗಂಭೀರವಾದ ಆತ್ಮಾವಲೋಕನ ಅಗತ್ಯ’ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಡಿ.ವೈಚಂದ್ರಚೂಡ್ ಹೇಳಿದರು.
ವಕೀಲಿ ವೃತ್ತಿಯಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಮೊದಲಿಗೆ ನೇಮಕವಾಗಿದ್ದ ಇಂದು ಮಲ್ಹೋತ್ರಾ ಅವರು ನಿವೃತ್ತಿ ಹಿನ್ನೆಲೆಯಲ್ಲಿ ಯುವ ವಕೀಲರ ವೇದಿಕೆ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನ್ಯಾಯಮೂರ್ತಿ ಇಂದು ಮಲ್ಹೋತ್ರಾ ನಿವೃತ್ತಿ ಆಗುತ್ತಿದ್ದಾರೆ ಎಂದರೆ, ಉಳಿದಂತೆ ಒಬ್ಬರು ಮಹಿಳಾ ನ್ಯಾಯಮೂರ್ತಿಯಷ್ಟೇ ಉಳಿಯುತ್ತಾರೆ. ಒಂದು ಸಂಸ್ಥೆಯಾಗಿ ಇದೊಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂಗತಿ ಎಂದು ಹೇಳಿದರು.
ದೇಶದ ವೈವಿಧ್ಯಯತೆಯು ಕೋರ್ಟ್ನಲ್ಲಿಯೂ ಬಿಂಬಿತವಾಗುವಂತೆ ನೋಡಿಕೊಳ್ಳಬೇಕು. ಇಂಥ ಕ್ರಮಗಳು ಸಂಸ್ಥೆಯ ಬಗೆಗೆ ಸಾರ್ವಜನಿಕರಲ್ಲೂ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲಿವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಾತನಾಡಿದ ಇಂದು ಮಲ್ಹೋತ್ರಾ ಅವರು, ಒಬ್ಬ ವಕೀಲರಾಗಿ ಉನ್ನತ ವೃತ್ತಿಪರತೆ ಕಾಯ್ದುಕೊಳ್ಳುವುದು ಈಗಿನ ಅಗತ್ಯ ಎಂದು ಸಲಹೆ ಮಾಡಿದರು.