ನವದೆಹಲಿ: ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ ಅವರು ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ಅವರನ್ನು ‘ಸೂಪರ್–ನೋಟಾ’ ಎಂದು ಜರಿದಿದ್ದಾರೆ.
‘ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮಯಂ (ಎಂಎನ್ಎಂ) ಪಕ್ಷವು ಸುಸ್ಥಿರ ರಾಜಕೀಯ ಪಕ್ಷವಲ್ಲ. ಹಾಗಾಗಿ ತಮಿಳುನಾಡು ವಿಧಾನಭಾ ಚುನಾವಣೆಯಲ್ಲಿ ಎಂಎನ್ಎಂ ಒಂದು ಸ್ಥಾನವನ್ನು ಗೆಲ್ಲಲೂ ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದಾರೆ.
‘ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮತ್ತು ಕಾಂಗ್ರೆಸ್ ಮೈತ್ರಿಕೂಟವು ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 234 ಸ್ಥಾನಗಳ ಪೈಕಿ 200 ಸ್ಥಾನಗಳನ್ನು ಗಳಿಸಲಿದೆ’ ಎಂದು ಕಾರ್ತಿ ಚಿದಂಬರಂ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಐಎಡಿಎಂಕೆ–ಬಿಜೆಪಿ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಸಂಸದ ಶಿವಗಂಗಾ ಅವರು ‘ಬಿಜೆಪಿಯ ‘ಹಿಂದಿ–ಹಿಂದುತ್ವ’ ನೀತಿಯು ತಮಿಳುನಾಡು ಜನತೆಗೆ ಇಷ್ಟವಿಲ್ಲ. ಹಾಗಾಗಿ ಬಿಜೆಪಿಯ ನೆರಳು ಹೊಂದಿರುವ ಪಕ್ಷವನ್ನು ಜನರು ಬೆಂಬಲಿಸಲ್ಲ’ ಎಂದರು.
‘ತಮಿಳು ಭಾಷೆ, ಸಂಸ್ಕೃತಿ ಮತ್ತು ತಮಿಳಿಯನ್ನರ ಭಾವನೆಗಳನ್ನು ಗೌರವಿಸದ ಸರ್ಕಾರ ಜನರಿಗೆ ಬೇಡವಾಗಿದೆ. ತಮಿಳುನಾಡಿನಲ್ಲಿ ಪ್ರಧಾನಿ ಮೋದಿ ಮತ್ತು ಅನೇಕ ಬಿಜೆಪಿ ನಾಯಕರು ಭಾರೀ ಪ್ರಚಾರವನ್ನು ಮಾಡಿದರು. ಆದರೂ ತಮಿಳುನಾಡಿನಲ್ಲಿ ಬಿಜೆಪಿಯ ಸಾಧನೆ ಶೂನ್ಯವಾಗಿರುತ್ತದೆ’ ಎಂದು ಕಾರ್ತಿ ತಿಳಿಸಿದರು.
ಕಮಲ್ ಹಾಸನ್ ಅವರು ‘ಸೂಪರ್–ನೋಟಾ’. ಅವರ ಎಂಎನ್ಎಂ ಪಕ್ಷವು ಒಂದು ಸ್ಥಾನವನ್ನು ಗಳಿಸಲ್ಲ. ಅವರು ಕೇವಲ ಚುನಾವಣಾ ಪ್ರಚಾರಗಳನ್ನು ನಡೆಸಬಲ್ಲರು. ಆದರೆ ಚುನಾವಣೆಯ ಬಳಿಕ ಅವರ ಪಕ್ಷವು ಚದುರಿ ಹೋಗಲಿದೆ ಎಂದು ಟೀಕಿಸಿದರು.
ತಮಿಳುನಾಡು ವಿಧಾನಸಭಾ ಚುನಾವಣೆಯು ಏಪ್ರಿಲ್6 ರಂದು ನಡೆಯಲಿದ್ದು, ಮೇ2 ರಂದು ಫಲಿತಾಂಶ ಹೊರಬೀಳಲಿದೆ.