ಮುಂಬೈ: ನಟಿ ಕಂಗನಾ ರನೌತ್ ಅವರನ್ನು ಜ.25ರ ವರೆಗೆ ಬಂಧಿಸುವುದಿಲ್ಲ ಎಂದು ಮುಂಬೈ ಪೊಲೀಸರು ಬಾಂಬೆ ಹೈಕೋರ್ಟ್ಗೆ ಸೋಮವಾರ ತಿಳಿಸಿದ್ದಾರೆ. ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನಾನಿರತ ರೈತರನ್ನು ಪ್ರತ್ಯೇಕತಾವಾದಿಗಳ ಜತೆ ಹೋಲಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶ ಪ್ರಕಟಿಸಿದ ಪ್ರಕರಣ ಇದಾಗಿದೆ.
ಪ್ರಕರಣವು ಕಂಗನಾ ಅವರ ವಾಕ್ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಅಂಶವನ್ನೂ ಒಳಗೊಂಡಿದೆ. ಹೀಗಾಗಿ ಅವರಿಗೆ ಮಧ್ಯಂತರ ವಿನಾಯಿತಿ ನೀಡುವುದಾಗಿ ನ್ಯಾಯಮೂರ್ತಿ ನಿತಿನ್ ಜಾಮಾದಾರ್ ಮತ್ತು ಸಾರಂಗ್ ಕೊತ್ವಾಲ್ ಅವರಿದ್ದ ನ್ಯಾಯಪೀಠ ಹೇಳಿದೆ.
ಸಿಖ್ ಸಂಘಟನೆಯೊಂದು ನೀಡಿದ ದೂರಿನ ಆಧಾರದಲ್ಲಿ ಮುಂಬೈಯ ಖಾರ್ ಪೊಲೀಸ್ ಠಾಣೆಯಲ್ಲಿ ನವೆಂಬರ್ನಲ್ಲಿ ಕಂಗನಾ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಇದನ್ನು ರದ್ದುಪಡಿಸಬೇಕು ಎಂದು ಕೋರಿ ಅವರು ಈ ತಿಂಗಳ ಆರಂಭದಲ್ಲಿ ಬಾಂಬೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ನವೆಂಬರ್ 21ರಂದು ಮಾಡಲಾಗಿರುವ ಇನ್ಸ್ಟಾಗ್ರಾಂ ಪೋಸ್ಟ್ ಆಕ್ಷೇಪಿಸಿ ದೂರು ದಾಖಲಿಸಲಾಗಿದೆಯೇ ಹೊರತು ಯಾವುದೇ ಕಾನೂನಾತ್ಮಕ ಪ್ರಕರಣ ತಮ್ಮ ಮೇಲೆ ದಾಖಲಾಗಿಲ್ಲ ಎಂದು ವಕೀಲ ರಿಜ್ವಾನ್ ಸಿದ್ದಿಕಿ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ಕಂಗನಾ ತಿಳಿಸಿದ್ದರು.