ಶ್ರೀನಗರ: ಭಯೋತ್ಪಾದನಾ ಸಂಘಟನೆಗಳೊಂದಿಗೆ ನಂಟು ಹೊಂದಿದ ಆರೋಪದ ಮೇಲೆ ಕಾಶ್ಮೀರ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ಸೇರಿ ಮೂವರು ಸರ್ಕಾರಿ ನೌಕರರನ್ನು ಶುಕ್ರವಾರ ಜಮ್ಮು–ಕಾಶ್ಮೀರ ಆಡಳಿತವು ವಜಾಗೊಳಿಸಿದೆ.
ಕಾಶ್ಮೀರ ವಿಶ್ವವಿದ್ಯಾಲಯದ ರಾಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಅಲ್ತಾಫ್ ಹುಸೇನ್, ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಕ ಮೊಹಮ್ಮದ್ ಮಕ್ಬೂಲ್ ಹಜಂ, ಜಮ್ಮು–ಕಾಶ್ಮೀರ ಪೊಲೀಸ್ ಇಲಾಖೆಯ ಕಾನ್ಸ್ಟೆಬಲ್ ಗುಲಾಂ ರಸೂಲ್ ವಜಾಗೊಂಡವರು.
ಸಂವಿಧಾನದ 311 (2) (ಸಿ) ಅಡಿ ರಚಿಸಲಾದ ಸಮಿತಿಯ ಶಿಫಾರಸಿನ ಆಧಾರದ ಮೇಲೆ ಈ ಮೂವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಈ ನಿಯಮದ ಅನ್ವಯ ರಾಜ್ಯದ ಭದ್ರತೆಯ ಹಿತದೃಷ್ಟಿಯಿಂದ ವಿಚಾರಣೆಯಿಲ್ಲದೆ ಸೇವೆಯಿಂದ ವಜಾ ಮಾಡಲು ಅವಕಾಶವಿದೆ.