ನವದೆಹಲಿ: ’ಸಂವಿಧಾನದ 370ನೇ ವಿಧಿ ರದ್ದತಿ ಬಳಿಕ ಜಮ್ಮು ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸಿದೆ. ಹೂಡಿಕೆ ಮತ್ತು ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತಿದೆ’ ಎಂದು ಗೃಹಸಚಿವ ಅಮಿತ್ ಶಾ ಶನಿವಾರ ಪ್ರತಿಪಾದಿಸಿದರು.
ಎಚ್.ಟಿ ನಾಯಕತ್ವ ಶೃಂಗ ಸಭೆಯಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಸಂವಿಧಾನದ ವಿಧಿ 370 ಮತ್ತು 35 ಎ ರದ್ದು ಆಗಲಿದೆ ಎಂದು ಯಾರೂ ನಂಬಿರಲಿಲ್ಲ. ಆದರೆ ಪ್ರಧಾನಿ 2019ರಲ್ಲಿ ಅದನ್ನು ಮಾಡಿದರು ಎಂದರು.
‘ಈಗ ಅಲ್ಲಿ ಶಾಂತಿ ನೆಲೆಸಿದೆ ಎಂದು ನಾನು ಹೇಳಬಲ್ಲೆ. ಜೊತೆಗೆ ಹೂಡಿಕೆ ಹೆಚ್ಚುತ್ತಿದೆ. ಪ್ರವಾಸಿಗರು ಬರುತ್ತಿದ್ದಾರೆ. ಕಾಶ್ಮೀರ ನಿಧಾನಗತಿಯಲ್ಲಿ ಸಹಜ ಸ್ಥಿತಿಗೆ ಮರಳುತ್ತಿದ್ದು, ದೇಶದ ಜೊತೆಗೆ ನಿಲ್ಲುತ್ತಿದೆ’ ಎಂದು ಹೇಳಿದರು.
ಕೋವಿಡ್ ನಿರ್ವಹಣೆ ಕುರಿತು ಪ್ರಧಾನಿಯನ್ನು ಶ್ಲಾಘಿಸಿದ ಶಾ, 2014ರಲ್ಲಿ ನಮಗೆ ರಾಜಕೀಯ ಸ್ಥಿರತೆ ಬಂದಿದೆ. ಅದಕ್ಕೂ ಹಿಂದೆ ಸಮ್ಮಿಶ್ರ ಸರ್ಕಾರಗಳ ಯುಗ ಇತ್ತು ಎಂದು ಹೇಳಿದರು.