ನವದೆಹಲಿ: ‘ಈ ವರ್ಷ ಭಾರತ ರತ್ನ ಪ್ರಶಸ್ತಿಯನ್ನು ಸಾಂಕ್ರಾಮಿಕದ ಸಂದರ್ಭದಲ್ಲಿ ಜನರ ಸೇವೆಯಲ್ಲಿ ನಿರತರಾಗಿದ್ದ ಎಲ್ಲಾ ವೈದ್ಯರು ಮತ್ತು ದಾದಿಯರಿಗೆ ನೀಡಬೇಕು’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಭಾನುವಾರ ಒತ್ತಾಯಿಸಿದರು.
‘ಭಾರತೀಯ ವೈದ್ಯರಿಗೆ ಭಾರತ ರತ್ನ ನೀಡಬೇಕು. ಇದರಲ್ಲಿ ಎಲ್ಲಾ ವೈದ್ಯರು, ದಾದಿಯರು ಒಳಪಡುತ್ತಾರೆ. ಇದು ಪ್ರಾಣವನ್ನು ಲೆಕ್ಕಿಸದೇ ಜನರ ಸೇವೆಯಲ್ಲಿ ನಿರತರಾಗಿರುವ ವೈದ್ಯರಿಗೆ ನೀಡುವ ನಿಜವಾದ ಗೌರವವಾಗಿದೆ. ಈ ನಡೆಯಿಂದ ಇಡಿ ದೇಶಕ್ಕೆ ಸಂತೋಷವಾಗಬಹುದು’ ಎಂದು ಅವರು ಟ್ವೀಟ್ ಮಾಡಿದ್ದಾರೆ.
‘ಕೋವಿಡ್ನ ಎರಡನೇ ಅಲೆಯ ಸಂದರ್ಭದಲ್ಲಿ 730ಕ್ಕೂ ಹೆಚ್ಚು ವೈದ್ಯರು ಸೋಂಕಿನಿಂದ ಮೃತಪಟ್ಟಿದ್ದಾರೆ’ ಎಂದು ಭಾರತೀಯ ವೈದ್ಯಕೀಯ ಸಂಘವು(ಐಎಂಎ) ಜೂನ್ ತಿಂಗಳಲ್ಲಿ ಹೇಳಿತ್ತು.