ತಿರುವನಂತಪುರ: ರಾಜ್ಯದ ವಿಶ್ವವಿದ್ಯಾಲಯಗಳ ಕುಲಾಧಿಪತಿ ಸ್ಥಾನದಿಂದ ರಾಜ್ಯಪಾಲರನ್ನು ತೆರವುಗೊಳಿಸಿ, ಅಲ್ಲಿಗೆ ಶಿಕ್ಷಣ ತಜ್ಞರನ್ನು ನೇಮಕಗೊಳಿಸುವ ನಿಟ್ಟಿನಲ್ಲಿ ಕೇರಳ ವಿಧಾನಸಭೆಯು ಮಂಗಳವಾರ ವಿಶ್ವವಿದ್ಯಾಲಯ ಕಾನೂನುಗಳ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಿದೆ.
ಮಸೂದೆಗೆ ಸಂಬಂಧಿಸಿ ತನ್ನ ಸಲಹೆಗಳನ್ನು ಸ್ವೀಕರಿಸದ ಕಾರಣ ವಿರೋಧ ಪಕ್ಷ ಯುಡಿಎಫ್ ಸದನವನ್ನು ಬಹಿಷ್ಕರಿಸಿದೆ.
ಸುದೀರ್ಘ ಚರ್ಚೆಯ ಬಳಿಕ ಈ ಮಸೂದೆಯನ್ನು ಅಂಗೀಕರಿಸಲಾಗಿದೆ ಎಂದು ವಿಧಾನಸಭೆಯ ಸ್ಪೀಕರ್ ಎ.ಎನ್. ಶಂಸೀರ್ ತಿಳಿಸಿದ್ದಾರೆ.
‘ಕುಲಾಧಿಪತಿ ಸ್ಥಾನದಿಂದ ರಾಜ್ಯಪಾಲರನ್ನು ತೆರವುಗೊಳಿಸುವುದನ್ನು ನಾವು ವಿರೋಧಿಸುವುದಿಲ್ಲ. ಆದರೆ ಆ ಸ್ಥಾನಕ್ಕೆ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿಗಳನ್ನು ಅಥವಾ ಕೇರಳ ಹೈಕೋರ್ಟ್ನ ನಿವೃತ್ತ ಮುಖ್ಯನ್ಯಾಯಮೂರ್ತಿಗಳನ್ನು ನೇಮಕಗೊಳಿಸಬೇಕು’ ಎಂದು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಹೇಳಿದೆ.
ಇದಕ್ಕೆ ಪ್ರತಿಕ್ರಿಯಿಸಿದಕಾನೂನು ಸಚಿವ ಪಿ.ರಾಜೀವ್ ‘ನ್ಯಾಯಮೂರ್ತಿಗಳು ನೇಮಕಾತಿ ಸಮಿತಿಯಲ್ಲಿರಬಾರದು. ಅದಕ್ಕಿಂತ ಸ್ಪೀಕರ್ ಇದ್ದರೆ ಉತ್ತಮ. ವಿಶ್ವವಿದ್ಯಾಲಯಗಳ ಚುಕ್ಕಾಣಿ ಹಿಡಿಯಲು ನಿವೃತ್ತ ನ್ಯಾಯಮೂರ್ತಿಗಳು ಏಕೈಕ ಆಯ್ಕೆಯಲ್ಲ’ ಎಂದಿದ್ದಾರೆ.
ಈ ವಿಚಾರವಾಗಿ ಸರ್ಕಾರ ಭಿನ್ನ ನಿಲುವು ಪ್ರಕಟಿಸಿರುವುದರಿಂದ ವಿರೋಧಪಕ್ಷವು ಸದನವನ್ನು ಬಹಿಷ್ಕರಿಸಿತು.
‘ರಾಜ್ಯ ಸರ್ಕಾರವು ತಮಗೆ ಬೇಕಾದವರನ್ನು ನೇಮಕ ಮಾಡುವ ಮೂಲಕ ವಿಶ್ವವಿದ್ಯಾಲಯಗಳನ್ನು ಕಮ್ಯುನಿಸ್ಟ್ ಕೇಂದ್ರಗಳನ್ನಾಗಿ ಮಾಡಲು ಯತ್ನಿಸುತ್ತಿದೆ’ ಎಂದೂ ಆರೋಪಿಸಿದೆ.
ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮತ್ತು ಪಿಣರಾಯಿ ವಿಜಯನ್ ನೇತೃತ್ವದ ರಾಜ್ಯ ಸರ್ಕಾರದ ನಡುವಿನ ಸಂಘರ್ಷ ತಾರಕಕ್ಕೇರಿದ ಬೆನ್ನಲ್ಲೇ ಈ ಮಸೂದೆಯನ್ನು ಮಂಡಿಸಲಾಗಿದೆ.