ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರದ ಬಗ್ಗೆ ಕೇರಳದ ಕಾಂಗ್ರೆಸ್ ನೇತಾರನ ಅನುಚಿತ ಹೇಳಿಕೆ: ಕ್ಷಮೆಗೆ ಒತ್ತಾಯ

Last Updated 9 ಸೆಪ್ಟೆಂಬರ್ 2020, 8:41 IST
ಅಕ್ಷರ ಗಾತ್ರ

ತಿರುವನಂತಪುರಂ: ಅತ್ಯಾಚಾರ ಪ್ರಕರಣದ ಬಗ್ಗೆ ಮಹಿಳಾ ವಿರೋಧಿ ಹೇಳಿಕೆಯೊಂದನ್ನು ನೀಡುವ ಮೂಲಕ ಕೇರಳದ ಕಾಂಗ್ರೆಸ್ ನೇತಾರ ರಮೇಶ್ ಚೆನ್ನಿತ್ತಲ ವಿವಾದಕ್ಕೀಡಾಗಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ಕೋವಿಡ್ ಪರೀಕ್ಷೆ ವರದಿ ಪಡೆಯಲು ಹೋಗಿದ್ದ ಮಹಿಳೆಯೊಬ್ಬರನ್ನು ಆರೋಗ್ಯಾಧಿಕಾರಿಯೊಬ್ಬರು ಅತ್ಯಾಚಾರವೆಸಗಿದ ಪ್ರಕರಣ ನಡೆದಿತ್ತು. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ಚೆನ್ನಿತ್ತಲ ಅವರಲ್ಲಿ ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ಆರೋಗ್ಯಾಧಿಕಾರಿ ಕಾಂಗ್ರೆಸ್ ಪಕ್ಷ ಬೆಂಬಲಿತ ಸಂಘಟನೆಗೆ ಸೇರಿದವರಲ್ಲವೇ? ಅವರೊಬ್ಬ ಸಕ್ರಿಯ ಕಾರ್ಯಕರ್ತ. ಎಲ್ಲ ಕಾಂಗ್ರೆಸ್ಸಿಗರು ಇದೇ ರೀತಿ ದೌರ್ಜನ್ಯವೆಸಗಿದರೆ ಮಹಿಳೆಯರು ಬದುಕುವುದು ಹೇಗೆ? ಎಂದು ಕೇಳಿದ್ದಾರೆ.

ಇದಕ್ಕೆ ಚೆನ್ನಿತ್ತಲ ಅವರ ಪ್ರತಿಕ್ರಿಯೆ ಡಿವೈಎಫ್‍‌ಐ ಕಾರ್ಯಕರ್ತರು ಮಾತ್ರ ದೌರ್ಜನ್ಯವೆಸಗಬಹುದು ಎಂದು ಎಲ್ಲಿಯಾದರೂ ಬರೆದಿದೆಯೇ ಎಂದಾಗಿತ್ತು.

ಈ ಎಲ್ಲ ಆರೋಪಗಳು ಸುಳ್ಳು. ಆತ ಎನ್‌ಜಿಒ ಸಂಘಟನೆಯ ಭಾಗವಾಗಿದ್ದಾನೆ ಅಥವಾ ಕಾಂಗ್ರೆಸ್ ಪಕ್ಷದ ಸದಸ್ಯ ಎಂಬುದು ಸುಳ್ಳು ಎಂದು ಚೆನ್ನಿತ್ತಲ ಹೇಳಿದ್ದಾರೆ.

ಈ ಹೇಳಿಕೆ ಖಂಡಿಸಿದ ಕೇರಳದ ಆರೋಗ್ಯ ಸಚಿವೆ ಕೆ.ಕೆ ಶೈಲಜಾ, ಮಹಿಳೆಯರನ್ನು ಅವಮಾನಿಸಿ ಹೇಳಿಕೆ ನೀಡಿರುವ ಚೆನ್ನಿತ್ತಲ ಕ್ಷಮೆ ಕೇಳಬೇಕು. ಮಹಿಳೆಗೆ ಕಿರುಕುಳ ನೀಡಿದ ಅಥವಾ ಅವಮಾನಿಸಿದ ವ್ಯಕ್ತಿಗಳನ್ನು ಆರೋಗ್ಯ ಇಲಾಖೆಯಿಂದ ತೆಗೆದುಹಾಕಲಾಗುವುದುಎಂದಿದ್ದಾರೆ.

ಇತ್ತೀಚೆಗೆ ಕೇರಳದಲ್ಲಿ ನಡೆದ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಆರೋಗ್ಯ ಇಲಾಖೆಯಿಂದ ವಜಾ ಮಾಡಲಾಗಿದೆ.

ಆದಾಗ್ಯೂ ತನ್ನ ಹೇಳಿಕೆ ತಿರುಚಲಾಗಿದೆ ಎಂದು ಚೆನ್ನತ್ತಲ ಪ್ರತಿಕ್ರಿಯಿಸಿದ್ದಾರೆ. ಯಾವುದೇ ಮಹಿಳೆಯ ವಿರುದ್ಧ ದೌರ್ಜನ್ಯ ನಡೆಯಬಾರದು. ನನ್ನ ಹೇಳಿಕೆ ತಿರುಚುವ ಮೂಲಕ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಯತ್ನಿಸಲಾಗುತ್ತಿದೆ.ಜನರು ಈ ತಂತ್ರಕ್ಕೆ ಬೀಳಬಾರದು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT