ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದಲ್ಲಿ ಕೊರೊನಾ ಪ್ರಕರಣಗಳ ಏರಿಕೆ: ರಾಜ್ಯದಾದ್ಯಂತ ಸೆಕ್ಷನ್‌ 144 ಜಾರಿ

Last Updated 3 ಅಕ್ಟೋಬರ್ 2020, 13:23 IST
ಅಕ್ಷರ ಗಾತ್ರ

ತಿರುವನಂತಪುರ: ಕೊರೊನಾ ವೈರಸ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಕೇರಳ ಸರ್ಕಾರವು ರಾಜ್ಯದಾದ್ಯಂತ ಶನಿವಾರದಿಂದ ಸೆಕ್ಷನ್ 144 ಜಾರಿ ಮಾಡಿದೆ. ಇದರ ಪ್ರಕಾರ, ಐವರಿಗಿಂತ ಹೆಚ್ಚು ಮಂದಿ ಒಂದೇಕಡೆ ಸೇರುವಂತಿಲ್ಲ.

ಮುಖ್ಯ ಕಾರರ್ಯದರ್ಶಿ ವಿಶ್ವಾಸ್ ಮೆಹ್ತಾ ಅವರು ಆದೇಶ ಹೊರಡಿಸಿದ್ದು, ಅಕ್ಟೋಬರ್ 31ರ ವರೆಗೂ ಜಾರಿಯಲ್ಲಿರಲಿದೆ.

‘ರಾಜ್ಯದಲ್ಲಿ ಕೋವಿಡ್–19 ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ಸಾರ್ವಜನಿಕ ಸಭೆಗಳು ಮತ್ತು ಕೂಟಗಳಿಂದ ಸೋಂಕಿನ ಹರಡುವಿಕೆಯ ಅಪಾಯವ ಹೆಚ್ಚು. ಹೀಗಾಗಿ ಗುಂಪುಗೂಡುವಿಕೆ ಮತ್ತು ಐವರಿಗಿಂತ ಹೆಚ್ಚು ಜನ ಒಂದೆಡೆ ಸೇರುವುದನ್ನು ನಿರ್ಬಂಧಿಸಲಾಗಿದೆ’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

‘ಆಯಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಪರಿಸ್ಥಿತಿ ಅವಲೋಕಿಸಿಕೊಂಡು ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಸೆಕ್ಷನ್ 144ರ ಅಡಿ ಕ್ರಮಗಳನ್ನು ಕೈಗೊಳ್ಳಬೇಕು. ಕಂಟೈನ್‌ಮೆಂಟ್ ವಲಯಗಳಲ್ಲಿ ಕಠಿಣ ನಿರ್ಬಂಧಗಳನ್ನು ವಿಧಿಸಬೇಕು. ವಿವಾಹ, ಅಂತ್ಯಕ್ರಿಯೆ ಮತ್ತಿತರ ಸಮಾರಂಭಗಳಿಗೆ ವಿನಾಯಿತಿ ಮುಂದುವರಿಸಲಾಗಿದೆ. ಆದರೆ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಗಳು ಆಯಾ ಜಿಲ್ಲೆಗಳ ಪರಿಸ್ಥಿತಿ ಅವಲೋಕಿಸಿ ತೀರ್ಮಾನ ಕೈಗೊಳ್ಳಬೇಕು’ ಎಂದು ಆದೇಶದಲ್ಲಿ ಹೇಳಲಾಗಿದೆ.

ತೀರಾ ಅನಿವಾರ್ಯವಲ್ಲದ ಹೊರತು ಮನೆಯಿಂದ ಹೊರ ಹೋಗದಂತೆ ಜನರಿಗೆ ಸಲಹೆ ನೀಡಲಾಗಿದೆ. ಕಂಟೈನ್‌ಮೆಂಟ್‌ ಪ್ರದೇಶಗಳಲ್ಲಿ ಅಗತ್ಯ ಸೇವೆ ಹೊರತುಪಡಿಸಿ ಇನ್ನಿತರ ಯಾವುದೇ ಚಟುವಟಿಕೆಗಳಿಗೆ ಅನುಮತಿ ಇಲ್ಲ.

ಧಾರ್ಮಿಕ, ಸಾಂಸ್ಕೃತಿಕ, ಅಕಾಡೆಮಿಕ್, ಉದ್ಘಾಟನಾ ಸಮಾರಂಭಗಳು, ಅಂತ್ಯಕ್ರಿಯೆಯಲ್ಲಿ 20 ಜನ ಭಾಗವಹಿಸಲಷ್ಟೇ ಅವಕಾಶ ನೀಡಲಾಗಿದೆ. ವಿವಾಹ ಸಮಾರಂಭಗಳಲ್ಲಿ ಗರಿಷ್ಠ 50 ಜನ ಭಾಗವಹಿಸಲು ಅವಕಾಶ ನೀಡಲಾಗಿದೆ.

ಕೇರಳದಲ್ಲಿ ಶುಕ್ರವಾರ ದಿನವೊಂದರ ಗರಿಷ್ಠ, ಅಂದರೆ 9,258 ಕೋವಿಡ್–19 ಪ್ರಕರಣಗಳು ಪತ್ತೆಯಾಗಿದ್ದವು. ಸದ್ಯ ರಾಜ್ಯದಲ್ಲಿ 77,482 ಸಕ್ರಿಯ ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT