ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರನೇ ಹಂತದ ಮತದಾನ ಇಂದು: ತಮಿಳುನಾಡು, ಕೇರಳದಲ್ಲಿ ಒಂದೇ ಹಂತದಲ್ಲಿ ಪೂರ್ಣ

ಪಶ್ಚಿಮ ಬಂಗಾಳದಲ್ಲಿ ಇನ್ನೂ 5 ಹಂತಗಳು ಬಾಕಿ
Last Updated 5 ಏಪ್ರಿಲ್ 2021, 20:59 IST
ಅಕ್ಷರ ಗಾತ್ರ

ತಿರುವನಂತಪುರ/ಚೆನ್ನೈ/ಪುದುಚೇರಿ: ಕೇರಳ, ತಮಿಳುನಾಡು ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗೆ ಮಂಗಳವಾರ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಭಾರಿ ವಾಕ್ಸಮರಕ್ಕೆ ಕಾರಣವಾಗಿದ್ದ ಬಹಿರಂಗ ಪ್ರಚಾರ ಸಭೆಗಳು ಭಾನುವಾರಕ್ಕೆ ಅಂತ್ಯವಾಗಿವೆ. ಆದರೆ ಕೊನೆಯ ಕ್ಷಣದವರೆಗೂ ಮತದಾರರನ್ನು ಓಲೈಸಲು ಪಕ್ಷಗಳು ಮತ್ತು ಅಭ್ಯರ್ಥಿಗಳ ಯತ್ನ ಮುಂದುವರಿದಿದೆ.

ಕೇರಳ, ತಮಿಳುನಾಡು ಮತ್ತು ಪುದುಚೇರಿಯಲ್ಲಿ ಒಂದೇ ಹಂತದಲ್ಲಿ ಮತದಾನ ಮುಗಿಯಲಿದೆ. ಕೇರಳ ಮತ್ತು ತಮಿಳುನಾಡಿನಲ್ಲಿ ಆಡಳಿತ ಪಕ್ಷಗಳು ಮತ್ತು ವಿರೋಧ ಪಕ್ಷಗಳು ಬಿರುಸಿನ ಪ್ರಚಾರ ನಡೆಸಿವೆ. ಎರಡೂ ರಾಜ್ಯಗಳು ಭಾರಿ ವಾಕ್ಸಮರಕ್ಕೆ ಸಾಕ್ಷಿಯಾಗಿವೆ.

ಅಸ್ಸಾಂ ವಿಧಾನಸಭೆಗೆ ಸೋಮವಾರ ಮೂರನೇ ಮತ್ತು ಕೊನೆಯ ಹಂತದ ಮತದಾನ ನಡೆಯಲಿದೆ. ಅಸ್ಸಾಂನ ಪರ್ವತ ಪ್ರದೇಶ ಮತ್ತು ಬೋಡೋ ಜನರ ಪ್ರಾಬಲ್ಯವಿರುವ ಬೋಡೋಲ್ಯಾಂಡ್‌ ಪ್ರದೇಶದಲ್ಲಿ ಸೋಮವಾರ ಮತದಾನ ನಡೆಯಲಿದೆ. ಇಲ್ಲಿ ಎನ್‌ಡಿಎ ಮತ್ತು ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಂಡಿರುವ ಬೋಡೋ ಪೀಪಲ್ಸ್ ಫ್ರಂಟ್ ಮಧ್ಯೆ ನೇರ ಸ್ಪರ್ಧೆ ಇದೆ. ಸೋಮವಾರವೇ ಮತದಾನ ಪ್ರಕ್ರಿಯೆ ಪೂರ್ಣಗೊಂಡರೂ, ಫಲಿತಾಂಶಕ್ಕಾಗಿ ಸುಮಾರು ಒಂದು ತಿಂಗಳು ಕಾಯಬೇಕಿದೆ.

ಪಶ್ಚಿಮ ಬಂಗಾಳದಲ್ಲೂ ಸೋಮವಾರ ಮೂರನೇ ಹಂತದ ಮತದಾನ ನಡೆಯಲಿದೆ. ಆದರೆ ಇನ್ನೂ ಹಲವು ಕ್ಷೇತ್ರಗಳಲ್ಲಿ ಐದು ಹಂತದಲ್ಲಿ ಮತದಾನ ನಡೆಯಬೇಕಿದೆ. ಆ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯ ಬಿರುಸಿನಿಂದ ನಡೆಯುತ್ತಿದೆ.

**

ಕೇರಳದಲ್ಲಿ ತ್ರಿಕೋನ ಸ್ಪರ್ಧೆ

140 ಕ್ಷೇತ್ರಗಳು, 957 ಅಭ್ಯರ್ಥಿಗಳು, 2.78 ಕೋಟಿ ಮತದಾರರು

* ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷಿತ ಸಾಧನೆ ಮಾಡದ ಬಿಜೆಪಿ, ಈ ಭಾರಿ ತನ್ನ ಸ್ಥಾನವನ್ನು ಉತ್ತಮಪಡಿಸಿಕೊಳ್ಳುವ ಗುರಿ ಹೊಂದಿದೆ. ಮೆಟ್ರೊಮ್ಯಾನ್ ಇ.ಶ್ರೀಧರನ್ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದೆ

* ಎಲ್‌ಡಿಎಫ್ ಸರ್ಕಾರ ಭ್ರಷ್ಟಾಚಾರ ನಡೆಸಿದೆ ಎಂಬುದು ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ನ ಮುಖ್ಯ ಪ್ರಚಾರ ವಿಷಯವಾಗಿತ್ತು. ಒಂದೆಡೆ ಎಲ್‌ಡಿಎಫ್‌ ನೇತೃತ್ವದ ಎಡರಂಗ ಮತ್ತು ಮತ್ತೊಂದೆಡೆ ಬಿಜೆಪಿಯನ್ನು ಕಾಂಗ್ರೆಸ್‌ ಎದುರಿಸಬೇಕಿದೆ. ಎಲ್‌ಡಿಎಫ್‌ಯೇತರ ಮತಗಳು ಬಿಜೆಪಿ ಮತ್ತು ಕಾಂಗ್ರೆಸ್‌ ಮಧ್ಯೆ ಹಂಚಿಹೋಗುವ ಸಾಧ್ಯತೆ ಇದೆ

* ಸತತ ಪ್ರವಾಹಗಳ ನಿರ್ವಹಣೆ, ಕೋವಿಡ್‌ ಲಾಕ್‌ಡೌನ್ ಅವಧಿಯಲ್ಲಿ ಕೈಗೊಂಡ ಸಾಮಾಜಿಕ ಭದ್ರತಾ ಯೋಜನೆಗಳು ಎಲ್‌ಡಿಎಫ್ ವಿರುದ್ಧ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗುವುದನ್ನು ತಡೆದಿವೆ. ಇಂತಹ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಎಲ್‌ಡಿಎಫ್, ಚುನಾವಣೆಯನ್ನು ಎದುರಿಸುತ್ತಿದೆ.

**

ತಮಿಳುನಾಡು

* 234 ಕ್ಷೇತ್ರಗಳು * 3,998 ಅಭ್ಯರ್ಥಿಗಳು *6.28 ಕೋಟಿ ಮತದಾರರು

* ಆಡಳಿತಾರೂಢ ಎಐಎಡಿಎಂಕೆ ಮತ್ತು ಡಿಎಂಕೆ ಮಧ್ಯೆ ಹಲವು ಕ್ಷೇತ್ರಗಳಲ್ಲಿ ನೇರ ಸ್ಪರ್ಧೆ ಇದೆ. ಮತದಾರರನ್ನು ಸೆಳೆಯಲು ಎರಡೂ ಪಕ್ಷಗಳು ಭಾರಿ ಪ್ರಚಾರ ನಡೆಸಿವೆ

* ಎಐಎಡಿಎಂಕೆ ಜತೆ ಮೈತ್ರಿಮಾಡಿಕೊಂಡಿರುವ ಬಿಜೆಪಿ ತಮಿಳುನಾಡಿನಲ್ಲಿ ತನ್ನ ಅದೃಷ್ಟ ಪರೀಕ್ಷೆಗೆ ಇಳಿದಿದೆ. ‘ಕೇಂದ್ರ ಸರ್ಕಾರದ ತಮಿಳು ವಿರೋಧಿ ನೀತಿ’ಯ ಬಗೆಗಿನ ಅಸಮಾಧಾನದ ಮಧ್ಯೆಯೂ ಬಿಜೆಪಿ ನೆಲೆ ಕಂಡುಕೊಳ್ಳುತ್ತದೆಯೇ ಎಂಬುದು ಕುತೂಹಲದ ಸಂಗತಿ

* ಡಿಎಂಕೆ ಜತೆ ಮೈತ್ರಿಮಾಡಿಕೊಂಡಿರುವ ಕಾಂಗ್ರೆಸ್‌, ತನ್ನ ನೆಲೆಯನ್ನು ಉಳಿಸಿಕೊಳ್ಳಲು ಶತಾಯಗತಾಯ ಹೋರಾಡುತ್ತಿದೆ. ಚುನಾವಣೆಯ ಹೊಸ್ತಿಲಲ್ಲಿ ಪಕ್ಷದ ಹಲವು ನಾಯಕರು ಕಾಂಗ್ರೆಸ್‌ ತೊರೆದು, ಬಿಜೆಪಿ ಸೇರಿದ್ದು ದೊಡ್ಡ ಹಿನ್ನಡೆಯಾಗಿದೆ

* ಕಮಲ್ ಹಾಸನ್ ನೇತೃತ್ವದ ಮಕ್ಕಳ ನೀಧಿ ಮಯ್ಯಂ ಹಲವು ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸುವ ನಿರೀಕ್ಷೆ ಇದೆ. ಡಿಎಂಕೆ ಮತ್ತು ಎಐಎಡಿಎಂಕೆಯ ಹೊಸತಲೆಮಾರಿನ ನಾಯಕರು ಇದೇ ಮೊದಲ ಬಾರಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ.

**

ಪುದುಚೇರಿಯಲ್ಲಿ ಕಾಂಗ್ರೆಸ್ ವರ್ಸಸ್ ಕಾಂಗ್ರೆಸ್

*30 ಕ್ಷೇತ್ರಗಳು, 324 ಅಭ್ಯರ್ಥಿಗಳು, 10.03 ಲಕ್ಷ ಮತದಾರರು

* ಪುದುಚೇರಿಯಲ್ಲಿ ಈ ಬಾರಿ ಸ್ಪರ್ಧೆ ಏಕಮುಖವಾಗುವ ಸಾಧ್ಯತೆ ಅತ್ಯಧಿಕವಾಗಿದೆ. ಕಾಂಗ್ರೆಸ್‌ ಮತ್ತು ಡಿಎಂಕೆಯ ಹಲವು ಪ್ರಮುಖ ನಾಯಕರು ತಮ್ಮ ಪಕ್ಷಗಳನ್ನು ತೊರೆದು ಬಿಜೆಪಿ ಸೇರಿದ್ದಾರೆ. ಈ ನಾಯಕರಿಗೇ ಬಿಜೆಪಿ ಟಿಕೆಟ್ ನೀಡಿದೆ. ಇವರ ಮೂಲಕವೇ ಪುದುಚೇರಿಯಲ್ಲಿ ಸರ್ಕಾರ ರಚಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಹೀಗಾಗಿ ಈ ಚುನಾವಣೆಯನ್ನು ಕಾಂಗ್ರೆಸ್‌ ವರ್ಸಸ್ ಕಾಂಗ್ರೆಸ್ ಮತ್ತು ಡಿಎಂಕೆ ವರ್ಸಸ್ ಡಿಎಂಕೆ ಎಂದು ಕರೆಯಲಾಗಿದೆ. ಬಿಜೆಪಿ ಗೆಲ್ಲುವ ಸಾಧ್ಯತೆ ಹೆಚ್ಚು ಎಂಬ ವಿಶ್ಲೇಷಣೆ ಇದೆ.

**

ಪಶ್ಚಿಮ ಬಂಗಾಳ

31 ಕ್ಷೇತ್ರಗಳು, 205 ಅಭ್ಯರ್ಥಿಗಳು, 75.8 ಲಕ್ಷ ಮತದಾರರು

* ಪಶ್ಚಿಮ ಬಂಗಾಳದಲ್ಲಿ ಮೂರನೇ ಹಂತದಲ್ಲಿ ಮತದಾನ ನಡೆಯುವ ಜಿಲ್ಲೆಗಳಲ್ಲಿ ದಕ್ಷಿಣ 24 ಪರಗಣ ಜಿಲ್ಲೆಯೂ ಒಂದು. ಟಿಎಂಸಿ ಭದ್ರಕೋಟೆಯಾಗಿರುವ ಈ ಜಿಲ್ಲೆಯಲ್ಲಿ ಬಿಜೆಪಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿದೆ. ಇಲ್ಲಿ ಈಗ ಟಿಎಂಸಿ- ಬಿಜೆಪಿ-ಎಡರಂಗದ ಅಭ್ಯರ್ಥಿಗಳ ಮಧ್ಯೆ ತ್ರಿಕೋನ ಸ್ಪರ್ಧೆ ಇದೆ. ಪಶ್ಚಿಮ ಬಂಗಾಳ ವಿಧಾನಸಭೆಗೆ 31 ಶಾಸಕರನ್ನು ಆಯ್ಕೆ ಮಾಡಿ ಕಳುಹಿಸುವ ಈ ಜಿಲ್ಲೆಯಿಂದ ಬಿಜೆಪಿ ಮತ್ತು ಟಿಎಂಸಿ ಬಿರುಸಿನ ಪ್ರಚಾರ ನಡೆಸಿವೆ.

* ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಎಡರಂಗ ಮೈತ್ರಿಕೂಟದ ಐಎಸ್ಎಫ್‌ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಐಎಸ್‌ಎಫ್ ಅಭ್ಯರ್ಥಿಗಳು ಟಿಎಂಸಿಯ ಮುಸ್ಲಿಂ ಮತಗಳನ್ನು ಸೆಳೆಯುವ ಸಾಧ್ಯತೆ ಅತ್ಯಧಿಕವಾಗಿದೆ. ಇದು ಬಿಜೆಪಿಗೆ ವರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

**

ಅಸ್ಸಾಂ: ಬೋಡೋ ಜನರ ಮಧ್ಯೆ ಪೈಪೋಟಿ

*40 ಕ್ಷೇತ್ರಗಳು, 337 ಅಭ್ಯರ್ಥಿಗಳು, 79.19 ಲಕ್ಷ ಮತದಾರರು

* ಮೂರು ಮತ್ತು ಕೊನೆಯ ಹಂತದ ಮತದಾನ

* ಬೋಡೋಲ್ಯಾಂಡ್ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. ಬಿಜೆಪಿಯ ಮಿತ್ರಪಕ್ಷ ಯುಪಿಪಿಎಲ್ ಮತ್ತು ಕಾಂಗ್ರೆಸ್‌ನ ಮಿತ್ರಪಕ್ಷ ಬಿಪಿಎಫ್ ಮಧ್ಯೆ ಇಲ್ಲಿ ನೇರ ಹಣಾಹಣಿ ಇದೆ. ಎರಡೂ ಪಕ್ಷಗಳು ಸಮಾನ ಬಲ ಹೊಂದಿವೆ.

* ಬೋಡೋಲ್ಯಾಂಡ್ ಹೊರತುಪಡಿಸಿದ ಕ್ಷೇತ್ರಗಳಲ್ಲಿ ಅಸ್ಸಾಂ ಗಣ ಪರಿಷತ್ ಪ್ರಾಬಲ್ಯ ಹೊಂದಿದೆ. ಆದರೆ ಕಾಂಗ್ರೆಸ್ ನೇತೃತ್ವದಲ್ಲಿ ಎಐಯುಡಿಎಫ್ ಮತ್ತು ಬಿಪಿಎಫ್‌ ಮೈತ್ರಿ ಮಾಡಿಕೊಂಡಿರುವ ಕಾರಣ ಎನ್‌ಡಿಎ ತನ್ನ ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT