ತ್ರಿಶೂರ್: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕೆ ಇಳಿದಿರುವ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಮೂವರು ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತವಾಗಿವೆ. ಇದರಿಂದ ಬಿಜೆಪಿಗೆ ಭಾರಿ ಹಿನ್ನಡೆಯಾಗಿದೆ.
ಏಪ್ರಿಲ್ 6ರಂದು ಮತದಾನ ನಡೆಯಲಿರುವ ತಲಶೇರಿ, ಗುರುವಾಯೂರು ಮತ್ತು ದೇವಿಕುಳಂ ವಿಧಾನಸಭಾ ಕ್ಷೇತ್ರಗಳಲ್ಲಿ ಎನ್ಡಿಎ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತವಾಗಿವೆ. ತಲಶೇರಿ ಮತ್ತು ಗುರುವಾಯೂರಿನಲ್ಲಿ ಬಿಜೆಪಿ ತನ್ನದೇ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ದೇವಿಕುಳಂನಲ್ಲಿ ಮಿತ್ರಪಕ್ಷ ಎಐಎಡಿಎಂಕೆಯ ಅಭ್ಯರ್ಥಿ ಕಣಕ್ಕೆ ಇಳಿದಿದ್ದರು.
‘ಅಗತ್ಯ ದಾಖಲೆಪತ್ರಗಳನ್ನು ಸಲ್ಲಿಸದ ಕಾರಣ ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ’ ಎಂದು ಚುನಾವಣಾ ಅಧಿಕಾರಿಗಳು ಹೇಳಿದ್ದಾರೆ. ಈ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್ಗೆ ಹೋಗುತ್ತೇವೆ ಎಂದು ಬಿಜೆಪಿ ಕೇರಳ ಘಟಕ ಹೇಳಿದೆ. ತಲಶೇರಿಯಲ್ಲಿ ಬಿಜೆಪಿ ಕಣ್ಣೂರು ಘಟಕದ ಅಧ್ಯಕ್ಷ ಎನ್.ಹರಿದಾಸ್ ಹಾಗೂ ಗುರುವಾಯೂರಿನಲ್ಲಿ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷೆ ನಿವೇದಿತಾ ಅವರ ನಾಮಪತ್ರಗಳು ತಿರಸ್ಕೃತವಾಗಿವೆ.
ಕೇರಳದಲ್ಲಿ ವಿರೋಧ ಪಕ್ಷಗಳ ಒಕ್ಕೂಟ ಯುಡಿಎಫ್, ಈ ಬಾರಿಯ ಚುನಾವಣೆಗೆ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಪ್ರಣಾಳಿಕೆಯ ಪ್ರಮುಖ ಅಂಶಗಳು ಹೀಗಿವೆ-
* 40-60 ವರ್ಷದ ಗೃಹಿಣಿಯರಿಗೆ ₹ 2,000 ಪಿಂಚಣಿ
* ಬಡವರಿಗೆ ‘ನ್ಯಾಯ’ ಯೋಜನೆ ಅಡಿ ವಾರ್ಷಿಕ ₹ 72,000
* ಬಡವರಿಗೆ 5 ಲಕ್ಷ ಮನೆ ನಿರ್ಮಿಸುವ ವಸತಿ ಯೋಜನೆ
* 100 ಯುನಿಟ್ವರೆಗೆ ಉಚಿತ ವಿದ್ಯುತ್
* ಮಹಿಳಾ ಉದ್ಯಮಿಗಳಿಗೆ ₹ 10 ಲಕ್ಷದವರೆಗೆ ಬಡ್ಡಿರಹಿತ ಸಾಲ
* ಅಂಗವಿಕಲ, ವಿಧವೆ, ವೃದ್ಧರ ಸಾಮಾಜಿಕ ಭದ್ರತಾ ಪಿಂಚಣಿಯನ್ನು ₹ 1,600ರಿಂದ ₹ 2,500ಕ್ಕೆ ಏರಿಕೆ