ತಿರುವನಂತಪುರಂ (ಪಿಟಿಐ): ಕೋವಿಡ್ -19 ಸೋಂಕುಮನೆಗಳ ಒಳಾಂಗಣದಲ್ಲೂ ಪಸರಿಸದಂತೆ ಎಚ್ಚರ ವಹಿಸುವಂತೆ ಮತ್ತು ರೋಗವನ್ನು ದೂರವಿರಿಸಲು ಸರ್ಕಾರದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಗುರುವಾರಜನರನ್ನು ಒತ್ತಾಯಿಸಿದರು.
ಆರೋಗ್ಯ ಇಲಾಖೆಯ ಇತ್ತೀಚಿನ ಅಧ್ಯಯನ ಉಲ್ಲೇಖಿಸಿದ ಅವರು, ರಾಜ್ಯದ ಶೇ 35ರಷ್ಟು ಜನರು ಮನೆಯೊಳಗೇ ಈ ರೋಗಕ್ಕೆ ತುತ್ತಾಗಿರುವುದು ಪತ್ತೆಯಾಗಿದೆ. ಸದ್ಯದ ಪರಿಸ್ಥಿತಿಯು ಮನೆಯಲ್ಲಿ ಒಬ್ಬ ವ್ಯಕ್ತಿಗೆ ಸೋಂಕು ತಗುಲಿದಾಗ, ಇತರ ಸದಸ್ಯರಿಗೂ ರೋಗ ಹರಡುತ್ತದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹೋಮ್ ಕ್ವಾರಂಟೈನ್ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿರುವುದು ಈ ಪರಿಸ್ಥಿತಿಗೆ ಕಾರಣವೆಂದು ದೂಷಣೆ ಮಾಡಿದ ಸಚಿವೆ, ಮನೆಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಹೊಂದಿರುವವರು ಮಾತ್ರ ಹೋಂ ಕ್ವಾರಂಟೈನ್ಗೆ ಆದ್ಯತೆ ನೀಡಬೇಕು. ಉಳಿದವರು ವಸತಿ ಕೋವಿಡ್-ಕೇರ್ ಕೇಂದ್ರಗಳಿಗೆ (ಡಿಸಿಸಿ) ಹೋಗಬೇಕು. ಹೋಂಕ್ವಾರಂಟೈನ್ನಲ್ಲಿರುವವರು ತಮ್ಮ ಕೊಠಡಿಯಿಂದ ಹೊರ ಹೋಗಬಾರದು. ಒಳಾಂಗಣ ಪ್ರಸರಣದ ಅಪಾಯ ತಪ್ಪಿಸಲು ಮನೆಯ ಎಲ್ಲ ಸದಸ್ಯರು ಮಾಸ್ಕ್ ಧರಿಸಬೇಕು ಎಂದು ಹೇಳಿದರು.
ರೋಗಿಯು ಬಳಸುವ ಪಾತ್ರೆಗಳನ್ನು ಅಥವಾ ಇತರ ವಸ್ತುಗಳನ್ನು ಬೇರೆ ಯಾರೂ ಬಳಸಬಾರದು. ಮನೆಯ ಪ್ರತಿಯೊಬ್ಬ ಸದಸ್ಯರು ಮುನ್ನೆಚ್ಚರಿಕೆಯಾಗಿ ಸೋಪ್ನಿಂದ ಕೈ ತೊಳೆಯಬೇಕು ಎಂದು ಸಚಿವೆ ಹೇಳಿದರು.
ರೋಗದ ವಿರುದ್ಧ ಹೋರಾಡಲು ಜನರು ಅನುಸರಿಸಬೇಕಾದ ನಿರ್ದೇಶನಗಳ ಕೈಪಿಡಿಯನ್ನು ಸಚಿವೆ ಇದೇ ಸಂದರ್ಭ ಬಿಡುಗಡೆ ಮಾಡಿದರು.