ಸಮಾಲಖ್, ಹರಿಯಾಣ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮೂರು ದಿನಗಳ ವಾರ್ಷಿಕ ಸಭೆ ‘ಅಖಿಲ ಭಾರತೀಯ ಪ್ರತಿನಿಧಿ ಸಭಾ’ ಭಾನುವಾರ ಇಲ್ಲಿ ಆರಂಭವಾಗಲಿದೆ.
‘ಸಾಮಾಜಿಕ ಸಾಮರಸ್ಯದ ವಾತಾವರಣ ಸೃಷ್ಟಿ, ಜನರಿಗೆ ತಮ್ಮ ಕರ್ತವ್ಯಗಳ ನಿರ್ವಹಣೆಗೆ ಪ್ರೇರಣೆ ನೀಡುವುದು ಹಾಗೂ ಅವರನ್ನು ಸ್ವಾವಲಂಬಿಗಳನ್ನಾಗಿಸುವುದರ ಬಗ್ಗೆ ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಗುವುದು’ ಎಂದು ಆರ್ಎಸ್ಎಸ್ ಮುಖಂಡ ಸುನಿಲ್ ಅಂಬೇಕರ್ ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಸರಸಂಘಚಾಲಕ ಮೋಹನ್ ಭಾಗವತ್, ಸಹಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸಹಿತ 1,400ಕ್ಕೂ ಹೆಚ್ಚು ಮಂದಿ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಬಿಜೆಪಿ ವತಿಯಿಂದ ಜೆ.ಪಿ.ನಡ್ಡಾ, ಬಿ.ಎಲ್.ಸಂತೋಷ್, ಸಂಘ ಪರಿವಾರದ 34 ಸಂಘಟನೆಗಳ ಆಯ್ದ ಪದಾಧಿಕಾರಿಗಳು ಪಾಲ್ಗೊಳ್ಳುವರು’ ಎಂದು ಹೇಳಿದರು.
ಸಾಮಾಜಿಕ ಸಾಮರಸ್ಯ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಸ್ವಯಂಸೇವಕರು ಕಳೆದ ಕೆಲವು ವರ್ಷಗಳಿಂದ ನಡೆಸಿದ ಅಧ್ಯಯನಗಳು ಹಾಗೂ ಕೆಲಸಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದರು.