ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಕುರಿತು ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ಪೀಯೂಶ್ ಗೋಯಲ್ ಅವರು ಆಡಿರುವ ಮಾತುಗಳನ್ನು ಕಡತದಿಂದ ತೆಗೆಯಬೇಕು ಎಂದು ಕೋರಿ ರಾಜ್ಯಸಭೆ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆ ಅಧ್ಯಕ್ಷ ಎಂ.ವೆಂಕಯ್ಯನಾಯ್ಡು ಅವರಿಗೆ ಪತ್ರ ಬರೆದಿದ್ದಾರೆ.
ಸದನದ ನಿಯಮ ಉಲ್ಲಂಘಿಸಿದ್ದಕ್ಕಾಗಿ ಇಬ್ಬರೂ ಸಚಿವರು ಕ್ಷಮೆ ಕೇಳಬೇಕು ಎಂದೂ ಖರ್ಗೆ ಒತ್ತಾಯಿಸಿದ್ದಾರೆ. ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಅವರ ‘ರಾಷ್ಟ್ರಪತ್ನಿ’ ಹೇಳಿಕೆಗೆ ಸಂಬಂಧಿಸಿ ಇಬ್ಬರೂ ಸಚಿವರು ಸೋನಿಯಾ ವಿರುದ್ಧ ಹರಿಹಾಯ್ದಿದ್ದರು.
ನಿಯಮದ ಪ್ರಕಾರ, ಸದನದ ಸದಸ್ಯರಲ್ಲದ, ಅನ್ಯ ಸದನದ ಸದಸ್ಯರ ವಿರುದ್ಧ ಗಂಭೀರ ಹೇಳಿಕೆ ನೀಡುವಂತಿಲ್ಲ ಎಂದು ಹೇಳಿರುವ ಖರ್ಗೆ, ಪೂರಕವಾಗಿ ರಾಜ್ಯಸಭೆಯ ಮಾಜಿ ಅಧ್ಯಕ್ಷ ಆರ್.ವೆಂಕಟರಾಮನ್ 1987ರಲ್ಲಿ ನೀಡಿದ್ದ ರೂಲಿಂಗ್ ಉಲ್ಲೇಖಿಸದ್ದಾರೆ.
ಬೇರೊಂದು ಸದನದ ಸದಸ್ಯರ ವಿರುದ್ಧ ಹಕ್ಕುಚ್ಯುತಿ ಮಂಡಿಸುವ ಪ್ರಶ್ನೆಯೂ ಉದ್ಭವಿಸುವುದಿಲ್ಲ ಎಂದು ಹೇಳಿದ್ದಾರೆ.