ಲಖನೌ: ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ವಜಾಕ್ಕೆ ಆಗ್ರಹಿಸಿ ಪ್ರತಿಪಕ್ಷಗಳು ಸಂಸತ್ತಿನಲ್ಲಿ ಪಟ್ಟು ಹಿಡಿದಿವೆ. ಈ ಮಧ್ಯೆ ಮಿಶ್ರಾ ಅವರು ಪತ್ರಕರ್ತರೊಬ್ಬರನ್ನು ಥಳಿಸಿದ ಘಟನೆ ಉತ್ತರ ಪ್ರದೇಶದ ಲಖನೌದಲ್ಲಿ ಬುಧವಾರ ವರದಿಯಾಗಿದೆ.
ಲಖೀಂಪುರ–ಖೇರಿ ರೈತರ ಸಾವಿನ ಪ್ರಕರಣದಲ್ಲಿ ಪುತ್ರ ಆಶಿಶ್ ಮಿಶ್ರಾ ವಿರುದ್ಧ ಎಸ್ಐಟಿ ದಾಖಲಿಸಿರುವ ದೋಷಾರೋಪಪಟ್ಟಿ ಕುರಿತು ಪ್ರಶ್ನೆ ಕೇಳಿದ ಪತ್ರಕರ್ತನನ್ನು ಬೆದರಿಸಿದ ಸಚಿವ ಮಿಶ್ರಾ, ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇದನ್ನು ಪುಷ್ಟೀಕರಿಸುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ಸ್ಥಾಪಿಸಲಾದ ಆಮ್ಲಜನಕ ಘಟಕದ ಉದ್ಘಾಟನೆಗೆ ಬಂದಿದ್ದ ಮಿಶ್ರಾ ಅವರು ಪತ್ರಕರ್ತ ಕೇಳಿದ ಪ್ರಶ್ನೆಗೆ ತಾಳ್ಮೆ ಕಳೆದುಕೊಂಡರು. ಎಸ್ಐಟಿ ಆರೋಪದ ಬಗ್ಗೆ ಅಭಿಪ್ರಾಯ ಪಡೆಯಲು ಪತ್ರಕರ್ತ ಕೇಳಿದ ಪ್ರಶ್ನೆಗೆ ಕೆರಳಿದ ಮಿಶ್ರಾ, ‘ನಿನಗೆ ತಲೆ ಕೆಟ್ಟಿದೆಯಾ. ಫೋನ್ ಬಂದ್ ಮಾಡು’ ಎಂದು ಕಿರುಚಾಡಿದ್ದಾರೆ.ಪತ್ರಕರ್ತನ ಕೊರಳಪಟ್ಟಿ ಹಿಡಿದು ಎಳೆದಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ.
ಪತ್ರಕರ್ತರು ಕಳ್ಳರು ಎಂದು ಕರೆದ ಮಿಶ್ರಾ, ಪತ್ರಕರ್ತರೊಬ್ಬರ ಮೊಬೈಲ್ ಕಿತ್ತುಕೊಂಡರು. ‘ಹುಚ್ಚರ ರೀತಿ ಪ್ರಶ್ನೆ ಕೇಳಬೇಡಿ.ನೀವು ಒಬ್ಬ ಅಮಾಯಕನನ್ನು ಆರೋಪಿಯನ್ನಾಗಿ ಬಿಂಬಿಸಿದ್ದೀರಿ. ನಿಮಗೆ ನಾಚಿಕೆಯಾಗುವುದಿಲ್ಲವೇ’ ಎಂದು ಮಿಶ್ರಾ ಹೇಳಿದ್ದು ವಿಡಿಯೊದಲ್ಲಿದೆ.ಸಚಿವರ ವರ್ತನೆ ಖಂಡಿಸಿ ಜಿಲ್ಲಾಧಿಕಾರಿಗೆ ದೂರು ಸಲ್ಲಿ ಸಿದಪತ್ರಕರ್ತರ ನಿಯೋಗ, ಭದ್ರತೆ ಒದಗಿಸುವಂತೆಕೋರಿತು.
Is this how Ajay Mishra Teni whos Son is Accused for brutally killing farmers from his car should speak to the media and Police ?
— Youth Congress (@IYC) December 15, 2021
Shame!
Ajay Mishra Teni should resign now!#टेनी_को_बर्ख़ास्त_करो pic.twitter.com/CXWqfAKo0W
ಸಂದಿಗ್ಧದಲ್ಲಿ ಬಿಜೆಪಿ
ಅಜಯ್ ಮಿಶ್ರಾ ವರ್ತನೆಗೆ ಪ್ರತಿಪಕ್ಷಗಳು ಕಿಡಿಕಾರಿವೆ.ಬಿಜೆಪಿ ಸ್ವತಃ ಇಕ್ಕಟ್ಟಿನಲ್ಲಿ ಸಿಲುಕಿದೆ ಎಂದು ಪಕ್ಷದ ಉತ್ತರ ಪ್ರದೇಶ ರಾಜ್ಯ ಘಟಕದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ‘ಮಿಶ್ರಾ ಅವರನ್ನು ಈಗ ವಜಾಗೊಳಿಸುವುದರಿಂದ ಬ್ರಾಹ್ಮಣ ಸಮುದಾಯಕ್ಕೆ ತಪ್ಪು ಸಂದೇಶ ಹೋಗುತ್ತದೆ. ಇದೇ ವೇಳೆ ಅವರನ್ನು ಸಚಿವರನ್ನಾಗಿ ಮುಂದುವರಿಸುವ ನಿರ್ಧಾರವು ಪಕ್ಷಕ್ಕೆ ಮುಜುಗರ ತರುತ್ತದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರೈತರು ಹಾಗೂ ಪ್ರತಿಪಕ್ಷಗಳು ಮಿಶ್ರಾ ವಜಾಕ್ಕೆ ಪಟ್ಟು ಹಿಡಿದಿದ್ದರೂ, ಈ ಬೇಡಿಕೆಯನ್ನು ಒಪ್ಪಲು ಬಿಜೆಪಿ ಸಿದ್ಧವಿಲ್ಲ. ಚುನಾವಣೆಯಲ್ಲಿ ಪ್ರಭಾವಶಾಲಿಯಾಗಿರುವ ಬ್ರಾಹ್ಮಣ ಸಮುದಾಯದ ಮತಗಳನ್ನು ದೂರ ಮಾಡಿಕೊಳ್ಳಲು ಪಕ್ಷ ಸಿದ್ಧವಿಲ್ಲ. ಈಗಾಗಲೇ ಈ ಸಮುದಾಯಕ್ಕೆ ಪಕ್ಷದ ಮೇಲೆ ಸಿಟ್ಟಿದೆ ಎಂದು ವಿಶ್ಲೇಷಿಸಲಾಗಿದೆ.
**
ಮಿಶ್ರಾ ಅವರನ್ನು ಸಂಪುಟದಿಂದ ತಕ್ಷಣ ವಜಾಗೊಳಿಸಬೇಕು. ಅವರು ಸಚಿವರಾಗಿ ಮುಂದುವರಿದರೆ, ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ.
–ಪ್ರಮೋದ್ ತಿವಾರಿ, ಕಾಂಗ್ರೆಸ್ ಹಿರಿಯ ಮುಖಂಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.