ಭುವನೇಶ್ವರ: ಇಲ್ಲಿನ ಬಿಜು ಪಟ್ನಾಯಕ್ ವಿಮಾನ ನಿಲ್ದಾಣದ ಹೊರಗೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ವಾಹನದ ಮೇಲೆ ಕಾಂಗ್ರೆಸ್ನ ವಿದ್ಯಾರ್ಥಿ ಘಟಕ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್ಎಸ್ಯುಐ) ಕಾರ್ಯಕರ್ತರು ಭಾನುವಾರ ಮೊಟ್ಟೆಗಳನ್ನು ಎಸೆದಿದ್ದಾರೆ.
ಸಚಿವರ ಪುತ್ರ ಆರೋಪಿಯಾಗಿರುವ ಲಖಿಂಪುರ–ಖೇರಿ ಹಿಂಸಾಚಾರ ಪ್ರಕರಣ ಖಂಡಿಸಿ ಎನ್ಎಸ್ಯುಐ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು.
ಕಟಕ್ ಬಳಿಯ ಮುಂಡಲಿಯಲ್ಲಿರುವ ಸಿಐಎಸ್ಎಫ್ ಆವರಣದಲ್ಲಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾ ತೆರಳುತ್ತಿದ್ದರು. ಸಚಿವರ ಒಡಿಶಾ ಭೇಟಿಯನ್ನು ಪ್ರತಿಭಟಿಸುವುದಾಗಿ ಎನ್ಎಸ್ಯುಐ ಈ ಹಿಂದೆ ಹೇಳಿತ್ತು.
ವಿದ್ಯಾರ್ಥಿ ಘಟಕದ ಕಾರ್ಯಕರ್ತರು ಕೇಂದ್ರ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿದರು. ಈ ವೇಳೆ ಪೊಲೀಸರು ಕೆಲವು ಎನ್ಎಸ್ಯುವಿ ಘಟಕದ ಕಾರ್ಯಕರ್ತರನ್ನು ಬಂಧಿಸಿದ್ದಾರೆ.