ನವದೆಹಲಿ: ಉತ್ತರಪ್ರದೇಶದಲ್ಲಿ ಪೊಲೀಸ್ ನೇಮಕಾತಿಗಾಗಿ ನಾಲ್ಕು ವರ್ಷಗಳಿಂದಕಾಯುತ್ತಿರುವ ಯುವಕರು ಉದ್ಯೋಗಕ್ಕೆ ನಿಗದಿಪಡಿಸಿರುವ ವಯೋಮಿತಿ ಮೀರುತ್ತಿದ್ದಾರೆ. ಆದರೂ ಸರ್ಕಾರ ಮೌನವಹಿಸಿದೆ ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಶನಿವಾರ ಟೀಕಿಸಿದ್ದಾರೆ.
‘ಯಾವುದೇ ನೇಮಕಾತಿಯೂ ಆಗಿಲ್ಲ. ಆ ಬಗ್ಗೆ ಭರವಸೆಯೂ ದೊರೆತಿಲ್ಲ. ಹಾಗಾಗಿ, ಈ ಯುವಕರು ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ದನಿ ಎತ್ತಿದ್ದಾರೆ. ಆದರೂ ಅವರಿಗೆ ಯಾವುದೇ ಪರಿಹಾರ ದೊರಕಿಲ್ಲ’ ಎಂದು ವರುಣ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
‘ಆ ವಿದ್ಯಾರ್ಥಿಗಳು ಬೀದಿಗಿಳಿದರೆ ಅವರನ್ನು ತೊಂದರೆ ಕೊಡುವವರು ಎಂದು ಕರೆಯುತ್ತಾರೆ. ಇದು ಅನ್ಯಾಯವಲ್ಲವೇ’ ಎಂದೂ ವರುಣ್ ಪ್ರಶ್ನಿಸಿದ್ದಾರೆ.
ಬಿಜೆಪಿ ಸಂಸದರಾಗಿರುವ ವರುಣ್ ಗಾಂಧಿ ತಮ್ಮದೇ ಪಕ್ಷದ ಆಡಳಿತವಿರುವ ಉತ್ತರಪ್ರದೇಶ ಹಾಗೂ ಕೇಂದ್ರ ಸರ್ಕಾರಗಳ ಹಲವು ವಿಷಯಗಳ ಬಗ್ಗೆ ಅನೇಕ ಸಲ ಟೀಕೆ ಮಾಡಿದ್ದಾರೆ.