ನವದೆಹಲಿ (ಪಿಟಿಐ): ‘ಬಿಜೆಪಿಯು ಸಾಮಾಜಿಕ ನ್ಯಾಯದ ವಿರುದ್ಧವಾಗಿದೆ. ತಳ ಸಮುದಾಯದವರಿಗೆ ಮೀಸಲಾತಿ ಕಲ್ಪಿಸುವುದನ್ನೂ ವಿರೋಧಿಸುವ ಆ ಪಕ್ಷ ಸಮಾಜವನ್ನು ಕೋಮುವಾದೀಕರಣಗೊಳಿಸುತ್ತಿದೆ’ ಎಂದು ಆರ್ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಟೀಕಿಸಿದ್ದಾರೆ.
‘ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ಪ್ರಯತ್ನಿಸಿದ್ದೆ. ಇದನ್ನು ತಡೆಯುವುದಕ್ಕಾಗಿ ನನ್ನ ವಿರುದ್ಧ ಇ.ಡಿ ಮತ್ತು ಸಿಬಿಐ ಅಸ್ತ್ರ ಬಳಸಲಾಯಿತು. ಬಿಜೆಪಿಯು 90ರ ದಶಕದಿಂದಲೂ ಒಬಿಸಿ ಮೀಸಲಾತಿಯನ್ನು ವಿರೋಧಿಸುತ್ತಾ ಬಂದಿತ್ತು’ ಎಂದು ಸೋಮವಾರ ಆರೋಪಿಸಿದ್ದಾರೆ.
‘ನಾವು ಇ.ಡಿ ಹಾಗೂ ಸಿಬಿಐ ದಾಳಿಗಳಿಗೆ ಹೆದರುವುದಿಲ್ಲ. ಬೆಲೆ ಏರಿಕೆ ಹಾಗೂ ನಿರುದ್ಯೋಗ ಸಮಸ್ಯೆಯಿಂದ ಹೈರಾಣಾಗಿರುವ ಜನರು ಮೋದಿ ಸರ್ಕಾರವನ್ನು ತೊಡೆದು ಹಾಕುವ ಸಂಕಲ್ಪ ಮಾಡಿದ್ದಾರೆ’ ಎಂದು ತಿಳಿಸಿದ್ದಾರೆ.