ನವದೆಹಲಿ: ರಾಷ್ಟ್ರೀಯ ಜನತಾ ದಳದ(ಆರ್ಜೆಡಿ) ವರಿಷ್ಠ ಲಾಲು ಪ್ರಸಾದ್ ಯಾದವ್ ಅವರ ಮೇವು ಹಗರಣದ ‘ಲೂಟಿ’ ಮಾದರಿಯನ್ನು ದೆಹಲಿಯಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅನುಸರಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೆಹಲಿಯಲ್ಲಿ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರವು ಮದ್ಯ, ಶಿಕ್ಷಣ, ಡಿಟಿಸಿ ಬಸ್ ಹಗರಣಗಳಲ್ಲಿ ಮುಳುಗಿದೆ. ಜತೆಗೆ ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸುವ ಪ್ರಯತ್ನ ಮಾಡುತ್ತಿದೆ’ ಎಂದು ದೂರಿದ್ದಾರೆ.
‘ದೆಹಲಿಯಲ್ಲಿ ಕೇಜ್ರಿವಾಲ್ ಅವರು ಭ್ರಷ್ಟಾಚಾರದ ಹೊಸ ಮಾದರಿಯನ್ನು ಪ್ರಸ್ತುತಪಡಿಸುತ್ತಿದ್ದು, ಲಾಲು ಪ್ರಸಾದ್ ಯಾದವ್ ಅವರ ‘ಲೂಟಿ’ ಮಾದರಿಯನ್ನೇ ಅನುಸರಿಸುತ್ತಿದ್ದಾರೆ’ ಎಂದು ಠಾಕೂರ್ ಆರೋಪಿಸಿದ್ದಾರೆ.
AAP govt involved in liquor, education, DTC bus scams, & even deprived labourers of their rights. Arvind Kejriwal has presented a new model of corruption; Lalu Prasad Yadav's 'loot' model is being followed by Kejriwal in Delhi: Union Minister Anurag Thakur pic.twitter.com/MZK27Ahnhg
— ANI (@ANI) December 3, 2022
ನಾಳೆ ಎಂಸಿಡಿ ಮತದಾನ: ಬಿಗಿ ಭದ್ರತೆ
ದೆಹಲಿ ಮಹಾನಗರ ಪಾಲಿಕೆಯ (ಎಂಸಿಡಿ) 250 ವಾರ್ಡ್ಗಳಿಗೆ ಭಾನುವಾರ ಮತದಾನ ನಡೆಯಲಿದ್ದು, ಬಿಗಿ ಭದ್ರತೆ ಏರ್ಪಡಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ಹೇಳಿದ್ದಾರೆ.
40 ಸಾವಿರ ಪೊಲೀಸರನ್ನು, 20 ಸಾವಿರ ಗೃಹರಕ್ಷಕರನ್ನು ಮತ್ತು ಅರೆಸೇನಾ ಪಡೆಯ 108 ಕಂಪನಿಗಳನ್ನು ಹಾಗೂ ರಾಜ್ಯ ಸಶಸ್ತ್ರ ಪೊಲೀಸ್ ಪಡೆಯನ್ನೂ ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದಿದ್ದಾರೆ.
ಸೂಕ್ಷ್ಮ ಪ್ರದೇಶಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕಣ್ಗಾವಲಿಗಾಗಿ 60 ಡ್ರೋನ್ಗಳನ್ನು ಬಳಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮತದಾನದ ವೇಳೆ ಕೋಮು ಗಲಭೆ ನಡೆಯದಂತೆ ಎಚ್ಚರಿಕೆ ವಹಿಸುವುದು, ಅಭ್ಯರ್ಥಿಗಳು ಮತದಾರರಿಗೆ ಆಮಿಷವೊಡ್ಡದಂತೆ ತಡೆಯುವುದು ಪೊಲೀಸರು ಮುಖ್ಯ ಗುರಿಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ. ಶಾಂತಿ ಸಮಿತಿ ಸದಸ್ಯರ ಜೊತೆ ಸಹಾಯಕ ಪೊಲೀಸ್ ಆಯುಕ್ತರು ಸಭೆ ನಡೆಸಿದ್ದಾರೆ ಎಂದಿದ್ದಾರೆ.
ವಿದ್ಯುನ್ಮಾನ ಮತ ಯಂತ್ರಗಳನ್ನು (ಇವಿಎಂ) ಇರಿಸಿರುವ ಭದ್ರತಾ ಕೊಠಡಿಗಳು, ಮತದಾನ ಕೇಂದ್ರಗಳು ಹಾಗೂ ಮತಎಣಿಕೆ ಕೇಂದ್ರಗಳ ಮೇಲೆ ಪೊಲೀಸರು ನಿಗಾ ಇರಿಸಿದ್ದಾರೆ ಎಂದೂ ಮಾಹಿತಿ ನೀಡಿದ್ದಾರೆ. ಡಿಸೆಂಬರ್ 7ರಂದು ಮತಎಣಿಕೆ ನಡೆಯಲಿದೆ.
ಎಂಸಿಡಿ ಚುನಾವಣೆಯಲ್ಲಿ 1.45 ಕೋಟಿಗೂ ಅಧಿಕ ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ. 1,349 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದೆಹಲಿಯನ್ನು ಕಸದ ದಿಬ್ಬ ಮಾಡಿದ್ದ ಬಿಜೆಪಿ: ಸಿಸೋಡಿಯಾ
‘ಎಂಸಿಡಿಯಲ್ಲಿ 15 ವರ್ಷಗಳ ಕಾಲ ಆಡಳಿತ ನಡೆಸಿದ್ದ ಬಿಜೆಪಿಯು ರಾಷ್ಟ್ರ ರಾಜಧಾನಿಯನ್ನು ಕಸದ ದಿಬ್ಬವನ್ನಾಗಿ ಮಾಡಿತ್ತು’ ಎಂದು ಆರೋಪಿಸಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ‘ಎಂಸಿಡಿ ಚುನಾವಣೆಯಲ್ಲೂ ಜನರು ಎಎಪಿಯನ್ನೇ ಆಯ್ಕೆ ಮಾಡಲಿದ್ದಾರೆ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.