ಕೊಚ್ಚಿ: ಕೇರಳದ ಆಡಳಿತಾರೂಢ ಎಲ್ಡಿಎಫ್ ಮೈತ್ರಿಕೂಟದ ಭಾಗವಾಗಿರುವ ಇಂಡಿಯನ್ ನ್ಯಾಷನಲ್ ಲೀಗ್ನ (ಐಎನ್ಎಲ್) ಎರಡು ಬಣಗಳ ಬೆಂಬಲಿಗರು ಸಚಿವರ ಎದುರೇ ಪರಸ್ಪರ ಹೊಡೆದಾಡಿಕೊಳ್ಳುವ ಮೂಲಕಪಕ್ಷದ ಆಂತರಿಕ ಕಲಹ ಭಾನುವಾರ ತಾರಕಕ್ಕೆ ತಲುಪಿದೆ.
ಈ ಹಿಂದೆ ನಡೆದಿದ್ದ ಸಭೆಯಲ್ಲಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಕಾಸಿಮ್ ಇರಿಕ್ಕೂರ್ ಟಿಪ್ಪಣಿ ರಚಿಸುವಾಗ ಇಬ್ಬರು ಮುಖಂಡರ ಹೆಸರು ಕೈಬಿಟ್ಟಿದ್ದರು. ಭಾನುವಾರ ನಡೆದ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಕ್ಷದ ಅಧ್ಯಕ್ಷ ಎ. ಪಿ. ಅಬ್ದುಲ್ ವಹಾಬ್ ಅವರ ಬಣ ಇರಿಕ್ಕೂರ್ ಅವರ ಕ್ರಮವನ್ನು ಪ್ರಶ್ನಿಸಿತು. ಆಗ ಅಲ್ಲಿ ವಾಗ್ಯುದ್ಧ ಆರಂಭವಾಯಿತು. ಇರಿಕ್ಕೂರ್ ಪ್ರಜಾಪ್ರಭುತ್ವ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆಎಂದು ಆರೋಪಿಸಿ ವಹಾಬ್ ಬಣ ಸಭೆಯನ್ನು ಬಹಿಷ್ಕರಿಸಿತು. ಬಂದರು ಸಚಿವ ಅಹಮ್ಮದ್ ದೇವರ್ಕೋವಿಲ್ ಅವರು ಈ ವೇಳೆ ಹಾಜರಿದ್ದರು.
ಇದೇ ವೇಳೆ ಹೋಟೆಲ್ ಎದುರು ಎರಡೂ ಬಣಗಳ ನಡುವೆ ಹೊಡೆದಾಟ ಆರಂಭವಾಯಿತು. ದೊಡ್ಡ ಸಂಖ್ಯೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಎರಡೂ ಬಣದ ಬೆಂಬಲಿಗರನ್ನು ಚದುರಿಸಿದರು. ಸಚಿವ ಅಹಮ್ಮದ್ ದೇವರ್ಕೋವಿಲ್ ಅವರನ್ನು ಪೊಲೀಸರು ಸುರಕ್ಷಿತವಾಗಿ ಕರೆದೊಯ್ದರು ಎಂದು ಮೂಲಗಳು ತಿಳಿಸಿವೆ.
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಇಬ್ಭಾಗವಾದ ಬಳಿಕ 1994ರಲ್ಲಿಇಂಡಿಯನ್ ನ್ಯಾಷನಲ್ ಲೀಗ್ಅನ್ನು ರಚಿಸಲಾಯಿತು. ಇದೇ ಮೊದಲ ಬಾರಿಗೆ ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರದಲ್ಲಿ ಐಎನ್ಎಲ್ಗೆ ಸಚಿವ ಸ್ಥಾನ ನೀಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.