ತಿರುವನಂತಪುರ: ಕೊರೊನಾ ಮಾರ್ಗಸೂಚಿಗೆ ಅನುಸಾರವಾಗಿ ಕೇರಳದಲ್ಲಿ ಈ ಬಾರಿಯ ಓಣಂ ಹಬ್ಬವನ್ನು ಬಹಳ ಸರಳವಾಗಿ ಆಚರಿಸಲಾಗುತ್ತಿದೆ.
ಪ್ರತಿವರ್ಷವೂ ತಿರುಓಣಂ ದಿನದಂದು ಮಹಾರಾಜ ಮಹಾಬಲಿವೇಷಧಾರಿ ಮನೆ–ಮನೆಗೆ ಭೇಟಿ ನೀಡುತ್ತಾರೆ. ಗ್ರಾಮಗಳಲ್ಲಿ ಸಾಂಪ್ರದಾಯಿಕ ಕಲೆ ಪ್ರದರ್ಶನ, ಸಾಮೂಹಿಕ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತದೆ. ಈ ಮೂಲಕ ಓಣಂ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಆದರೆ ಈ ಬಾರಿ ಕೋವಿಡ್ ಸಾಂಕ್ರಾಮಿಕ ಪಿಡುಗಿನಿಂದ ಸಂಭ್ರಮಾಚರಣೆಗೆ ನಿರ್ಬಂಧವನ್ನು ಹೇರಲಾಗಿದೆ.
ಆದರೆ ಮನೆಗಳಲ್ಲಿ ಆಕರ್ಷಕ ಹೂವಿನ ರಂಗೋಲಿ (ಪೂಕಳಂ), ಭವ್ಯ ಅಲಂಕಾರ ಮಾಡಲಾಗಿದೆ. ಓಣಂ ಹಬ್ಬದ ಅಂಗವಾಗಿ ಆಯೋಜಿಸುವ ‘ಅಥಂ ಉತ್ಸವ’ವನ್ನು ಈ ಬಾರಿ ಆಚರಿಸಲಾಗುತ್ತಿಲ್ಲ.
ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಅವರು ಹಬ್ಬದ ಸಂದರ್ಭದಲ್ಲಿ ಜನತೆಗೆ ಶುಭಕೋರಿದ್ದಾರೆ.