ಲಖನೌ: ಉತ್ತರ ಪ್ರದೇಶ ರಾಜ್ಯದಲ್ಲಿ ಜಾನುವಾರುಗಳಿಗೆಲಂಪಿ ವೈರಸ್ (ಚರ್ಮ ಸಂಬಂಧಿ ರೋಗ; ಎಲ್ಎಸ್ಡಿ) ಹರಡುತ್ತಿರುವ ಹಿನ್ನೆಲೆಯಲ್ಲಿಜಾನುವಾರು ಜಾತ್ರೆಗಳನ್ನು ಸ್ಥಗಿತಗೊಳಿಸಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆದೇಶಿಸಿದ್ದಾರೆ.
ದೇಶದ ಉತ್ತರ ಭಾಗದ ಕೆಲವುರಾಜ್ಯಗಳಲ್ಲಿ ಲಂಪಿ ವೈರಸ್ ಹರಡುತ್ತಿದ್ದು ಹಲವಾರು ಜಾನುವಾರುಗಳು ಸಾವನ್ನಪ್ಪಿರುವುದರಿಂದ ಸರ್ಕಾರ ಈ ಆದೇಶ ಹೊರಡಿಸಿದೆ.
ಲಂಪಿ ವೈರಸ್ ತಡೆಯಲು ಉತ್ತರ ಪ್ರದೇಶ ಸರ್ಕಾರಮಿಷನ್ ಮೋಡ್ನಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂದು ಮುಖ್ಯಮಂತ್ರಿಯೋಗಿ ಆದಿತ್ಯನಾಥ ಹೇಳಿದ್ದಾರೆ. ಇದಕ್ಕಾಗಿ ಲಸಿಕೆ ಅಭಿಯಾನ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ
ಜನರು ಕೂಡ ಗೋಶಾಲೆಗಳಿಗೆ ತೆರಳದಂತೆ ಹಾಗೂ ಜಾನುವಾರು ಮೃತಪಟ್ಟರೆ ಅವುಗಳನ್ನು ಸುಡಬೇಕು ಎಂದು ಸರ್ಕಾರ ಸೂಚನೆ ನೀಡಿದೆ. ಈಗಾಗಲೇ ರಾಜ್ಯದ 15 ಜಿಲ್ಲೆಗಳಲ್ಲಿ ಲಂಪಿ ವೈರಸ್ ಪ್ರಕರಣಗಳು ವರದಿಯಾಗಿವೆ. ರಾಜ್ಯದ ಪಶ್ಚಿಮ ಭಾಗದಲ್ಲಿ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿವೆ ಎಂದು ಸರ್ಕಾರ ಹೇಳಿದೆ.
ರಾಜ್ಯ ಸರ್ಕಾರ ಕೇಂದ್ರದೊಂದಿಗೆ ಸಮನ್ವಯ ಸಾಧಿಸಿದ್ದು ಚಿಕಿತ್ಸೆಗೆ ಅಗತ್ಯವಿರುವ ಔಷಧಗಳನ್ನು ತರಿಸಿಕೊಂಡಿದೆ. ಹಾಗೇ ನಿಯಂತ್ರಣ ಕೊಠಡಿಯನ್ನು ಕೂಡ ತೆರೆಯಲಾಗಿದೆ ಎಂದು ಸರ್ಕಾರ ಹೇಳಿದೆ.