ಠಾಣೆ: ಬಿಜೆಪಿ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಫೇಸ್ಬುಕ್ನಲ್ಲಿ ಸಂದೇಶವನ್ನು ಪೋಸ್ಟ್ ಮಾಡಿದ 22 ವರ್ಷದ ಮುಖೇಶ್ ಚವಾಣ್ ವಿರುದ್ಧ ಮಹಾರಾಷ್ಟ್ರ ಪೊಲೀಸರು ಸೋಮವಾರ ಪ್ರಕರಣ ದಾಖಲಿಸಿದ್ದಾರೆ.
ಪ್ರವಾದಿ ಮಹಮ್ಮದ್ ಅವರ ಬಗ್ಗೆ ನೀಡಿದ್ದ ಅವಹೇಳನಕಾರಿ ಹೇಳಿಕೆಗೆ ಸಂಬಂಧಿಸಿದಂತೆ ಶರ್ಮಾ ಅವರ ವಿರುದ್ಧ ವಿವಿಧೆಡೆ ಹಲವು ಪ್ರಕರಣಗಳು ದಾಖಲಾಗಿವೆ. ಈ ಸಂಬಂಧ ಕೆಲವೆಡೆಯ ಪೊಲೀಸರು ಸಮನ್ಸ್ಗಳನ್ನೂ ಜಾರಿಗೊಳಿಸಿದ್ದಾರೆ.
ಚವಾಣ್ ಅವರು ತಮ್ಮ ಫೇಸ್ಬುಕ್ ಸ್ಟೇಟಸ್ನಲ್ಲಿ ‘ನಾನು ನೂಪುರ್ ಶರ್ಮಾ ಅವರನ್ನು ಬೆಂಬಲಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ಇದನ್ನು ಗಮನಿಸಿದ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದಾರೆ ಎಂದುಭಿವಂಡಿ ಪಟ್ಟಣದ ನಾರ್ಪೋಲಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಸಮಯ ಕೋರಿದ ನೂಪುರ್:
ಪ್ರವಾದಿ ಮಹಮ್ಮದ್ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ದಾಖಲಿಸಲು ನೂಪುರ್ ಶರ್ಮಾ ಅವರು ಸೋಮವಾರಭಿವಂಡಿ ಪೊಲೀಸರ ಮುಂದೆ ಹಾಜರಾಗಬೇಕಿತ್ತು. ಆದರೆ ಹಾಜರಾಗಲು ಅವರು ಸಮಯಾವಕಾಶ ಕೋರಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಆದರೆ ಎಷ್ಟು ದಿನಗಳ ಸಮಯ ನೀಡಲಾಗಿದೆ ಎಂಬುದರ ಮಾಹಿತಿಯನ್ನು ಅವರು ನೀಡಲಿಲ್ಲ.
ಮೇ 30ರಂದು ರಾಝಾ ಅಕಾಡೆಮಿಯ ಪ್ರತಿನಿಧಿ ನೀಡಿದ ದೂರಿನ ಮೇರೆಗೆ ಠಾಣೆ ಜಿಲ್ಲೆಯ ಭಿವಾಂಡಿ ಪೊಲೀಸರು ಶರ್ಮಾ ವಿರುದ್ಧ ದೂರು ದಾಖಲಿಸಿದ್ದಾರೆ.
ಕೋಲ್ಕತ್ತ ಪೊಲೀಸರಿಂದ ಸಮನ್ಸ್ ಜಾರಿ (ಕೋಲ್ಕತ್ತ ವರದಿ): ಇದೇ ವಿಷಯಕ್ಕೆ ಸಂಬಂಧಿಸಿದಂತೆ ನೂಪುರ್ ಶರ್ಮಾ ಅವರಿಗೆ ಕೋಲ್ಕತ್ತ ಪೊಲೀಸರು ಸೋಮವಾರ ಸಮನ್ಸ್ ಜಾರಿಗೊಳಿಸಿದ್ದು, ಇದೇ 20ರಂದು ನರ್ಕೆಲ್ದಂಗ ಪೊಲೀಸ್ ಠಾಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಅಬುಲ್ ಸೊಹೈಲ್ ಅವರೂ ಶರ್ಮಾ ವಿರುದ್ಧ ಕೊಂಟೈ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.