ನವದೆಹಲಿ: ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ರಾಷ್ಟ್ರ ನಾಯಕರು ದೇಶದ ಜನತೆಗೆ ಮಹಾಶಿವರಾತ್ರಿಯ ಶುಭಾಶಯ ಕೋರಿದ್ದಾರೆ.
'ಹರಹರ ಮಹಾದೇವ' ಎಂಬ ಮಂತ್ರಘೋಷವನ್ನು ಜಪಿಸುವ ಮೂಲಕ ಗುರುವಾರ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, 'ಮಹಾಶಿವರಾತ್ರಿಯ ಈ ವಿಶೇಷ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಶುಭಾಶಯಗಳು' ಎಂದು ತಿಳಿಸಿದ್ದಾರೆ.
ಶಿವರಾತ್ರಿಯ ಪ್ರಯುಕ್ತ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ನಿಮ್ಮೆಲ್ಲರಿಗೂ ಮಹಾಶಿವರಾತ್ರಿಯ ಹಾರ್ದಿಕ ಶುಭಾಶಯಗಳು' ಎಂದು ಹೇಳಿದ್ದಾರೆ.
'ಮಹಾಶಿವರಾತ್ರಿಯ ಶುಭ ಸಂದರ್ಭದಲ್ಲಿ ಎಲ್ಲಾ ದೇಶವಾಸಿಗಳಿಗೆ ಶುಭಾಶಯಗಳು. ಪಾರ್ವತಿ ಮತ್ತು ಶಿವನ ಪವಿತ್ರ ವಿವಾಹದ ಸ್ಮರಣಾರ್ಥವಾಗಿ ಆಚರಿಸಲಾಗುವ ಈ ಹಬ್ಬವು ಇಡೀ ಮಾನವ ಜನಾಂಗಕ್ಕೆ ಒಳ್ಳೆಯದನ್ನು ಮಾಡಲಿ' ಎಂದು ರಾಷ್ಟ್ರಪತಿ ಕೋವಿಂದ್ ತಿಳಿಸಿದ್ದಾರೆ.
'ಶಿವರಾತ್ರಿಯ ಶುಭ ಸಂದರ್ಭದಲ್ಲಿ ದೇಶದ ಎಲ್ಲ ಜನರಿಗೂ ಶುಭಾಶಯಗಳು. ಮಹಾದೇವನು ಎಲ್ಲರ ಬದುಕಿನಲ್ಲಿ ಸುಖ, ಶಾಂತಿ ಮತ್ತು ಸಮೃದ್ದಿ ನೀಡಲೆಂದು ನಾನು ಪ್ರಾರ್ಥಿಸುತ್ತೇನೆ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟಿಸಿದ್ದಾರೆ.
ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ರವಿಶಂಕರ್ ಪ್ರಸಾದ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವು ರಾಷ್ಟ್ರ ನಾಯಕರು ಶಿವರಾತ್ರಿಯ ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ.