ನಾಗಪುರ: ಹೆಣ್ಣು ಹುಲಿ ಅವನಿಯ ಮರಿ, ಕಾಡೊಳಗೆ ಬಿಟ್ಟ 8 ದಿನಗಳ ನಂತರ ಮೃತಪಟ್ಟಿತು ಎಂದು ಮಹಾರಾಷ್ಟ್ರ ಅರಣ್ಯ ಇಲಾಖೆ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
‘ಪಿಟಿಆರ್ಎಫ್–84’ ಎಂದು ಹೆಸರಿಸಲಾಗಿದ್ದ, 3 ವರ್ಷದ ಹೆಣ್ಣು ಹುಲಿಯನ್ನು ಮಾರ್ಚ್ 5ರಂದು ನಾಗಪುರ ಬಳಿಯ ಪೆಂಚ್ ಹುಲಿ ಸಂರಕ್ಷಿತಾರಣ್ಯದಲ್ಲಿ (ಪಿಟಿಆರ್)ಬಿಡಲಾಗಿತ್ತು.
ತನ್ನ ಎರಡು ಹೆಣ್ಣು ಮರಿಗಳೊಂದಿಗೆ ಯವತ್ಮಾಲ್ ಜಿಲ್ಲೆಯ ಪಂಢರಕಾವಾಡ ಅರಣ್ಯದಲ್ಲಿದ್ದ ಅವನಿಯನ್ನು ಮಾನವನ ಜೀವಕ್ಕೆ ಅಪಾಯಕಾರಿ ಎಂದು ಘೋಷಿಸಿ, 2018ರಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಅದಾದ ನಂತರ ಈ ಮರಿಯನ್ನು ರಕ್ಷಿಸಿ, ಪಿಟಿಆರ್ನಲ್ಲಿ ಇಡಲಾಗಿತ್ತು.
‘ಕಾಡಿನ ಇತರ ಪ್ರಾಣಿಗಳೊಂದಿಗೆ ನಡೆದ ಕಾದಾಟದಲ್ಲಿ ಹುಲಿಮರಿಯ ಬಲಗಾಲಿನಲ್ಲಿ ಗಾಯಗಳಾಗಿದ್ದವು. ಮಾರ್ಚ್ 8ರಂದು ಈ ಮರಿಯನ್ನು ಅರಣ್ಯದಿಂದ ಕರೆತಂದು ಚಿಕಿತ್ಸೆ ನೀಡಲಾಗುತ್ತಿತ್ತು‘ ಎಂದು ಪಿಟಿಆರ್ನ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ ರವಿಕಿರಣ್ ಗೋವೇಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಶನಿವಾರ ಸಂಜೆ ಹುಲಿಮರಿಯ ಆರೋಗ್ಯ ಮತ್ತಷ್ಟು ಹದಗಟ್ಟಿತು. ತಜ್ಞರ ಸಲಹೆಯಂತೆ ಅದನ್ನು ನಾಗಪುರದ ಗೋರೆವಾಡದಲ್ಲಿನ ಪಶುವೈದ್ಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಹುಲಿಮರಿ ರಾತ್ರಿ 10ಕ್ಕೆ ಮೃತಪಟ್ಟಿತು’ ಎಂದೂ ಅವರು ತಿಳಿಸಿದ್ದಾರೆ.