ನವದೆಹಲಿ:ಮಹಾರಾಷ್ಟ್ರದಲ್ಲಿ ಇತ್ತೀಚೆಗಿನ ರಾಜಕೀಯ ಬೆಳವಣಿಗೆಯಿಂದ ಉದ್ಭವಿಸಿರುವ ಸಾಂವಿಧಾನಿಕಬಿಕ್ಕಟ್ಟಿನ ಕುರಿತು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣ ಸಲ್ಲಿಸಿರುವ ಅರ್ಜಿ ಸಂಬಂಧ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಬಣಕ್ಕೆ ಮರು ಪ್ರಮಾಣ ಪತ್ರ ಸಲ್ಲಿಸಲು ಸುಪ್ರೀಂಕೋರ್ಟ್ ಬುಧವಾರ ಸೂಚಿಸಿತು.
ಪಕ್ಷ ವಿಭಜನೆ, ವಿಲೀನ, ಪಕ್ಷಾಂತರ ಮತ್ತು ಅನರ್ಹತೆ ಕುರಿತ ಸಾಂವಿಧಾನಿಕ ಬಿಕ್ಕಟ್ಟಿನ ಸಮಸ್ಯೆಗಳ ಬಗ್ಗೆ ಶಿವಸೇನಾ ಮತ್ತು ಅದರ ಬಂಡಾಯ ಶಾಸಕರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠವುಆಲಿಸಿತು.
ಎರಡೂ ಬಣಗಳ ವಾದ– ಪ್ರತಿವಾದ ಆಲಿಸಿದ ಪೀಠವು, ಪ್ರಕರಣವನ್ನು ಗುರುವಾರಕ್ಕೆ ಮುಂದೂಡಿತು. ಸಾಂವಿಧಾನಿಕ ಬಿಕ್ಕಟ್ಟಿನ ಬಗ್ಗೆ ತೀರ್ಪು ನೀಡಲು ಈ ಪ್ರಕರಣವನ್ನು ಗುರುವಾರ ಮೊದಲ ವಿಷಯವಾಗಿ ಕೈಗೆತ್ತಿಕೊಳ್ಳುವುದಾಗಿ ಪೀಠ ಹೇಳಿದೆ.
ಶಿಂದೆ ಬಣದ ಪರ ವಾದಿಸಿದ ವಕೀಲ ಸಾಳ್ವೆ ಅವರುಎತ್ತಿದ ಕಾನೂನು ಪ್ರಶ್ನೆಗಳ ಸಂಬಂಧ ಮರು ಟಿಪ್ಪಣಿ ಸಲ್ಲಿಸಲು ಪೀಠವು ಸೂಚಿಸಿತು.
ಉದ್ಧವ್ ಠಾಕ್ರೆ ಬಣದ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ‘ಶಿಂದೆ ಅವರೊಂದಿಗೆ ಕೈಜೋಡಿಸಿರುವ ಶಾಸಕರು ಮತ್ತೊಂದು ಪಕ್ಷದ ಜತೆಗೆ ವಿಲೀನವಾಗದೇ, ಸಂವಿಧಾನದ ಹತ್ತನೇ ಪರಿಚ್ಛೇದದ ಅಡಿಯಲ್ಲಿ ಅನರ್ಹತೆಯಿಂದ ಪಾರಾಗಲು ಬೇರೆ ಮಾರ್ಗವೇ’ ಇಲ್ಲ ಎಂದು ವಾದಿಸಿದರು.
‘ಇದು ಪಕ್ಷಾಂತರದ ಪ್ರಕರಣವಲ್ಲ. ಇದು ಆಂತರಿಕ ಬಂಡಾಯದ ಪ್ರಕರಣ. ಬೆಂಬಲ ಕಳೆದುಕೊಂಡ ನಾಯಕರಿಗೆ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಪಕ್ಷಾಂತರ ನಿಷೇಧ ಕಾಯ್ದೆಯೂ ಅಸ್ತ್ರವಲ್ಲ’ ಎಂದು ಹರೀಶ್ ಸಾಳ್ವೆ ಪ್ರತಿ ವಾದ ಮಾಡಿದರು.