ಮುಂಬೈ: ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ತೀವ್ರವಾಗಿ ಹೆಚ್ಚಾಗುತ್ತಿರುವದರಿಂದ ತುರ್ತು ಪರಿಸ್ಥಿತಿಯಲ್ಲಿ ಅಂತರ ರಾಜ್ಯ ಮತ್ತು ಅಂತರ ಜಿಲ್ಲೆಗಳ ಪ್ರಯಾಣಕ್ಕಾಗಿ ಇ–ಪಾಸ್ ವ್ಯವಸ್ಥೆಯನ್ನು ಶುಕ್ರವಾರ ಪುನಃ ಆರಂಭಿಸಲಾಗಿದೆ.
ಮಹಾರಾಷ್ಟ್ರ ಸರ್ಕಾರವುಗುರುವಾರ ರಾತ್ರಿಯಿಂದ ಜಾರಿಗೆ ಬರುವಂತೆ ಕಚೇರಿಗಳಲ್ಲಿ ಹಾಜರಾತಿ, ಮದುವೆ ಕಾರ್ಯಕ್ರಮ ಮತ್ತುಪ್ರಯಾಣದ ಮೇಲೆ ನಿರ್ಬಂಧ ವಿಧಿಸಿದೆ.
‘ರಾಜ್ಯದಲ್ಲಿ ಇ–ಪಾಸ್ ವ್ಯವಸ್ಥೆಯನ್ನು ಶುಕ್ರವಾರ ಮತ್ತೆ ಜಾರಿಗೆ ತರಲಾಗಿದ್ದು, ನಾಗರಿಕರು ತುರ್ತು ಸಂದರ್ಭಗಳಲ್ಲಿ ಮಾತ್ರ ಇದನ್ನು ಉಪಯೋಗಿಸಬೇಕು’ ಎಂದು ಮಹಾರಾಷ್ಟ್ರ ಡಿಜಿಪಿ ಸಂಜಯ್ ಪಾಂಡೆ ತಿಳಿಸಿದರು.
ಇ–ಪಾಸ್ ಬೇಕಾದವರು ಸಂಬಂಧಪಟ್ಟ ದಾಖಲೆಗಳೊಂದಿಗೆ https://covid19.mhpolice.in/ ಅರ್ಜಿ ಸಲ್ಲಿಸಬಹುದು. ಈ ವೇಳೆ ತುರ್ತು ಪ್ರಯಣದ ಕಾರಣವನ್ನು ತಿಳಿಸಬೇಕು ಅವರು ಹೇಳಿದರು.
‘ಇಂಟರ್ನೆಟ್ ಸೇವೆ ಲಭ್ಯವಿಲ್ಲದವರು ಹತ್ತಿರದ ಪೊಲೀಸ್ ಠಾಣೆಗೆ ಭೇಟಿ ನೀಡಬಹುದು. ಪೊಲೀಸ್ ಅಧಿಕಾರಿಗಳು ಇ–ಪಾಸ್ ಅರ್ಜಿಯನ್ನು ಸಲ್ಲಿಸಲು ಸಹಾಯ ಮಾಡುತ್ತಾರೆ. ಈ ಇ–ಪಾಸ್ ವ್ಯವಸ್ಥೆಯು ಕೇವಲ ವೈಯಕ್ತಿಕ ಬಳಕೆಗಾಗಿ ಸೀಮಿತವಾಗಿದೆ’ ಎಂದು ಸಂಜಯ್ ಪಾಂಡೆ ಮಾಹಿತಿ ನೀಡಿದರು.
ಈ ಹಿಂದೆ, ಇ–ಪಾಸ್ ವ್ಯವಸ್ಥೆಯನ್ನು ಪ್ರಾರಂಭಿಸಲು ಪೊಲೀಸ್ ಅಧಿಕಾರಿಗಳು ನಿರಾಕರಿಸಿದ್ದರು. ಅತ್ಯಗತ್ಯವಿರುವವರಿಗೆ ಪ್ರಯಾಣಿಸಲು ಅವಕಾಶ ನೀಡುವಂತೆ ಪೊಲೀಸ್ ಸಿಬ್ಬಂದಿಗೆ ಸೂಚಿಸಲಾಗಿತ್ತು.
ಕಳೆದ ವರ್ಷ ಮೊದಲ ಲಾಕ್ಡೌನ್ ಸಂದರ್ಭದಲ್ಲಿ ಎಲ್ಲಾ ತುರ್ತು ಮತ್ತು ಅಗತ್ಯ ಸೇವೆಗಳಿಗೆ ಇ–ಪಾಸ್ಗಳನ್ನು ನೀಡಲಾಗಿತ್ತು.
ಮಹಾರಾಷ್ಟ್ರದಲ್ಲಿ ಗುರುವಾರ 67,013 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 40,94,840ಕ್ಕೆ ಏರಿಕೆಯಾಗಿದೆ. ಗುರುವಾರ ರಾತ್ರಿಯವರೆಗೆ 62,479 ಮಂದಿ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.