ಬುಧವಾರ, ಮಾರ್ಚ್ 22, 2023
32 °C
ಭ್ರಷ್ಟಾಚಾರ ಪ್ರಕರಣ

ಅನಿಲ್ ದೇಶಮುಖ್‌ಗೆ ಜಾಮೀನು ನೀಡಿ, ಕೂಡಲೇ ಆದೇಶ ತಡೆ ಹಿಡಿದ ಬಾಂಬೆ ಹೈಕೋರ್ಟ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿಕೊಂಡಿರುವ ಪ್ರಕರಣದಲ್ಲಿ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಅವರಿಗೆ ಸೋಮವಾರ ಜಾಮೀನು ಮಂಜೂರು ಮಾಡಿದ ಬಾಂಬೆ ಹೈಕೋರ್ಟ್‌, ತಕ್ಷಣವೇ ತನ್ನ ಆದೇಶವನ್ನು 10 ದಿನಗಳವರೆಗೆ ತಡೆ ಹಿಡಿದಿದೆ.

ಎನ್‌ಸಿಪಿ ನಾಯಕರೂ ಆಗಿರುವ 74 ವರ್ಷದ ದೇಶ್‌ಮುಖ್‌ ಅವರು ವೈದ್ಯಕೀಯ ಕಾರಣಗಳನ್ನು ಪರಿಗಣಿಸಿ ತಮಗೆ ಜಾಮೀನು ನೀಡುವಂತೆ ಕೋರಿ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಕಳೆದ ತಿಂಗಳು ಮನವಿ ಮಾಡಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ್ದ ನ್ಯಾಯಾಲಯವು ದೇಶ್‌ಮುಖ್‌ ಮನವಿಯನ್ನು ತಳ್ಳಿಹಾಕಿತ್ತು. ಇದನ್ನು ಪ್ರಶ್ನಿಸಿ, ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಎಂ.ಎಸ್‌.ಕಾರಣಿಕ್‌ ಅವರಿದ್ದ ಏಕ ಸದಸ್ಯ ಪೀಠವು ಕಳೆದ ವಾರ ಎರಡೂ ಕಡೆಯ ವಾದಗಳನ್ನು ಆಲಿಸಿದ ಬಳಿಕ ಆದೇಶ ಕಾಯ್ದಿರಿಸಿತ್ತು.

ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ.) ಕಳೆದ (2021ರ) ನವೆಂಬರ್‌ನಲ್ಲಿ ಬಂಧಿಸಿದಾಗಿನಿಂದಲೂ ಅವರು ಜೈಲಿನಲ್ಲಿದ್ದಾರೆ. ಈ ವರ್ಷ ಏಪ್ರಿಲ್‌ನಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ಬಂಧಿಸಿದೆ.

ದೇಶಮುಖ್‌ ಅವರಿಗೆ ಜಾರಿ ನಿರ್ದೇಶನಾಲಯದ ಪ್ರಕರಣದಲ್ಲಿ ಕಳೆದ ತಿಂಗಳು ಜಾಮೀನು ಲಭಿಸಿದೆ.

ಮುಂಬೈನ ರೆಸ್ಟೋರೆಂಟ್‌ ಹಾಗೂ ಬಾರ್‌ಗಳಿಂದ ಮಾಸಿಕ ₹ 100 ಕೋಟಿ ಸಂಗ್ರಹ ಮಾಡಬೇಕು ಎಂದು ಪೊಲೀಸ್‌ ಅಧಿಕಾರಿಗಳಿಗೆ ದೇಶಮುಖ್‌ ಸೂಚನೆ ನೀಡಿದ್ದರು ಎಂದು ಐಪಿಎಸ್‌ ಅಧಿಕಾರಿ ಪರಮ್‌ಬೀರ್‌ ಸಿಂಗ್ 2021ರ ಮಾರ್ಚ್‌ನಲ್ಲಿ ಆರೋಪಿಸಿದ್ದರು. ಈ ಬಗ್ಗೆ ತನಿಖೆ ನಡೆಸುವಂತೆ 2021ರ ಏಪ್ರಿಲ್‌ನಲ್ಲಿ ಸಿಬಿಐಗೆ ಹೈಕೋರ್ಟ್‌ ನಿರ್ದೇಶನ ನೀಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು