ಮುಂಬೈ: ‘ಹವಾ ನಿಯಂತ್ರಣ (ಎಸಿ) ಘಟಕ ಸ್ಪೋಟಗೊಂಡು ಬೆಂಕಿ ಅವಘಡ ಸಂಭವಿಸಿ ಹದಿಮೂರು ಮಂದಿ ಕೋವಿಡ್ ಸಾವಿಗೆ ಕಾರಣವಾಗಿದ್ದ ಪಾಲ್ಘಾರ್ನ ಆಸ್ಪತ್ರೆಯಲ್ಲಿ ಗುರುವಾರದಿಂದ ಎಸಿ ಯಂತ್ರ ಕೆಟ್ಟಿದ್ದು, ದುರಸ್ತಿ ಕಾರ್ಯ ನಡೆಯುತ್ತಿತ್ತು’ ಎಂದು ಆಸ್ಪತ್ರೆಯ ನೌಕರರೊಬ್ಬರು ತಿಳಿಸಿದ್ದಾರೆ.
‘ಗುರುವಾರ ಆಸ್ಪತ್ರೆಗೆ ಹೋದಾಗ ಕೋವಿಡ್ ರೋಗಿಗಳ ವಾರ್ಡ್ನಲ್ಲಿದ್ದ ಎಸಿ ಕೆಟ್ಟು ಹೋಗಿತ್ತು. ಎಸಿ ಘಟಕದ ಪ್ಯಾನಲ್ಗಳನ್ನು ಬಿಚ್ಚಿಟ್ಟು ರಿಪೇರಿ ಮಾಡುತ್ತಿದುದನ್ನು ನಾನು ನೋಡಿದ್ದೆ. ಇದೇ ವೇಳೆ ಆಸ್ಪತ್ರೆಯಲ್ಲಿ ಕೆಲವು ಕಡೆ ತಾತ್ಕಾಲಿಕ ವ್ಯವಸ್ಥೆಗಾಗಿ ಫ್ಯಾನ್ಗಳನ್ನು ಜೋಡಿಸಲಾಗಿತ್ತು’ ಎಂದು ಆಸ್ಪತ್ರೆಯ ಸಿಬ್ಬಂದಿ ಸುಪ್ರಿಯ ದೇಶ್ಮುಖ್ ಸ್ಥಳೀಯ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.
ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದ ರೋಗಿಗಳ ಕುಟುಂಬದವರು ಮತ್ತು ಸಂಬಂಧಿಕರು ‘ಆಸ್ಪತ್ರೆಯ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ’ ಎಂದು ಪರಿಸ್ಥಿತಿ ಅವಲೋಕಿಸುವುದಕ್ಕಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದ ಸಚಿವ ಏಕನಾಥ್ ಶಿಂಧೆ ಅವರಿಗೆ ತಿಳಿಸಿದರು.
ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯ ವಿರಾರ್ನ ವಿಜಯ್ ವಲ್ಲಭ ಆಸ್ಪತ್ರೆಯ ಎರಡನೇ ಮಹಡಿಯ ಐಸಿಯು ಘಟಕದಲ್ಲಿ ಶುಕ್ರವಾರ ಮುಂಜಾನೆ ಬೆಂಕಿ ಅವಘಢ ಸಂಭವಿಸಿತ್ತು. ಘಟನೆಯಲ್ಲಿ ಐವರು ಮಹಿಳೆಯರು ಮತ್ತು ಎಂಟು ಪುರುಷ ರೋಗಿಗಳು ಸಾವನ್ನಪ್ಪಿದ್ದರು. ಬೆಂಕಿ ದುರಂತ ಸಂಭವಿಸಿದಾಗ ಆಸ್ಪತ್ರೆಯಲ್ಲಿ 90 ರೋಗಿಗಳಿದ್ದರು. ಅದರಲ್ಲಿ 18 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.